ತಿರುವನಂತಪುರ: ಕೋವಿಡ್-19'ಬಾಧಿಸಿರುವ ಮಾಹಿತಿ ಮರೆಮಾಚಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದಲ್ಲದೆ, ವಿವಿಧ ಪ್ರದೇಶಗಳಿಗೆ ಭೇಟಿ ನೀಡಿರುವ ಕಾಸರಗೋಡು ಕೂಡ್ಲು ನಿವಾಸಿಯ ಕ್ರಮ ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಸವಾಲೆಸೆಯುವ ರೀತಿಯಲ್ಲಿದ್ದು, ಈ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪ್ರಾಥಮಿಕ ಹಂತದ ತನಿಖೆ ನಡೆಯುತ್ತಿರುವುದಾಗಿ ರಾಜ್ಯ ಆರೋಗ್ಯ ಖಾತೆ ಸಚಿವೆ ಕೆ.ಕೆ ಶೈಲಜಾ ತಿರುವನಂತಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿದೇಶದಿಂದ ಆಗಮಿಸಿ, ನಿಗಾದಲ್ಲಿರಬೇಕಾದ ಈ ವ್ಯಕ್ತಿ, ಎಲ್ಲೆಂದರಲ್ಲಿ ಸುತ್ತಾಡಿರುವುದಲ್ಲದೆ, ಈತನ ಸಂಚಾರದ ಬಗ್ಗೆ ರೂಟ್ಮ್ಯಾಪ್ ತಯಾರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸದ ಧೋರಣೆ ಖಂಡನೀಯ. ಗಲ್ಫ್ ರಾಷ್ಟ್ರಗಳ ಸಹಿತ ವಿದೇಶದಲ್ಲಿರುವ ಕೇರಳೀಯರ ಸಂಖ್ಯೆ ಇತರ ರಾಜ್ಯಗಳಿಗಿಂತ ಹೆಚ್ಚಾಗಿದ್ದು, ಇವರೆಲ್ಲರೂ ಏಕ ಕಾಲಕ್ಕೆ ಊರಿಗೆ ವಾಪಸಾಗುತ್ತಿರುವುದರಿಂದ ಕೋವಿಡ್ ಪ್ರತಿರೋಧ ಚಟುವಟಿಕೆಗೆ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಈ ರೀತಿ ವಿದೇಶದಿಂದ ವಾಪಸಾಗುವವರು ಮನೆಯೊಳಗೆ ಸ್ವತಂತ್ರ ನಿಗಾದಲ್ಲಿರಬೇಕಾಗಿದೆ. ಈ ಸಂದರ್ಭ ಮನೆಯವರೊಂದಿಗೂ ಅಗತ್ಯ ಅಂತರ ಕಾಪಾಡಿಕೊಳ್ಳುವುದರ ಜತೆಗೆ ಅಗತ್ಯ ಜಗ್ರತಕ್ರಮವನ್ನು ಪಾಲಿಸಬೇಕು. ಈ ಬಗ್ಗೆ ವ್ಯಾಪಕ ಪ್ರಚಾರನಡೆಸಿ, ಜನಜಾಗೃತಿಮೂಡಿಸುತ್ತಿರುವ ಮಧ್ಯೆ, ವೈರಸ್ಬಾಧಿತ ಕೂಡ್ಲು ನಿವಾಸಿ ನಡೆಸಿರುವ ಕೃತ್ಯ ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಒಟ್ಟು 52ಕೋವಿಡ್-19 ವೈರಸ್ ಪ್ರಕರಣ ದಾಖಲಾಗಿದ್ದು, ಐಸೊಲೇಶನ್ ವಾರ್ಡಿನಲ್ಲಿ ಕಳೆಯುತ್ತಿರುವ ಇವರೆಲ್ಲರ ಆರೋಗ್ಯಸ್ಥಿತಿ ತೃಪ್ತಿಕರವಾಗಿದೆ ಎಂದೂ ತಿಳಿಸಿದ್ದಾರೆ.


