ಬದಿಯಡ್ಕ: ಶಾಲೆಯಲ್ಲಿ ಮಗು ಗಳಿಸಿದ ವ್ಯತ್ಯಸ್ಥ ಸಾಮಥ್ರ್ಯಗಳನ್ನು ರಕ್ಷಕರ, ಊರವರ ಎದುರು ಪ್ರಸ್ತುತಪಡಿಸುವ ಕಲಿಕೋತ್ಸವದ ಆಯೋಜನೆ ಶ್ಲಾಘನೀಯ ಎಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಪೆರಡಾಲ ಸರಕಾರಿ ಪ್ರೌಢಶಾಲಾ ಕಲಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಉತ್ತಮ ಮಟ್ಟದಲ್ಲಿದ್ದು ಎಲ್ಲರೂ ಇದನ್ನು ಅರಿತುಕೊಳ್ಳಬೇಕಿದೆ ಎಂದು ಅವರು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತಿ ಸದಸ್ಯೆ ಶಾಂತಾ ಮಾತನಾಡಿ ಮಕ್ಕಳಿಂದಲೇ ನಿರ್ವಹಿಸಲ್ಪಡುವ ಕಲಿಕೋತ್ಸವ ಶಾಲೆಯ ಹಾಗೂ ಮಕ್ಕಳ ಹಿರಿಮೆಯನ್ನು ಪ್ರದರ್ಶಿಸುತ್ತಿದೆ ಎಂದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಡುವನ್ ಕುಂಞ ಮಾತನಾಡಿ ಮಕ್ಕಳ ಪ್ರತಿಭೆಗೆ ಪ್ರದರ್ಶನದ ವೇದಿಕೆ ಸಿಕ್ಕಾಗ ರಕ್ಷಕರಿಗೂ ಅಭಿಮಾನ ಎಂದು ಅಭಿಪ್ರಾಯಪಟ್ಟರು. ಶಿಕ್ಷಕರಾದ ಚಂದ್ರಹಾಸ ನಂಬಿಯಾರ್, ಶಾಂತಾಮಣಿ ಶುಭಾಶಂಶನಗೈದರು. ಶಾಲಾ ಮುಖ್ಯಶಿಕ್ಷಕ ರಾಜಗೋಪಾಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ಶಾಲಾ ಶೈಕ್ಷಣಿಕ ಚಟುವಟಿಕೆಗಳ ವರದಿ ಹಾಗೂ ಹಿಂದಿ ಕ್ಲಬ್ನ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕೌಶಿಕ್ ಪ್ರಾರ್ಥನೆ ಹಾಡಿದರು. ಫರ್ಹಾನಾ ಕಾರ್ಯಕ್ರಮ ನಿರೂಪಿಸಿದರು. ಶರಣ್ಯ ಸ್ವಾಗತಿಸಿ, ಸಜಿನಾ ವಂದಿಸಿದರು. 1ರಿಂದ 9 ರವರೆಗಿನ ಮಕ್ಕಳಿಂದ ವಾಚನ, ಗಾಯನ, ಅಭಿನಯ ಗೀತೆ, ಪ್ರಹಸನ, ಸ್ಲೈಡ್ ಪ್ರದರ್ಶನ, ಪ್ರಯೋಗ ಮಂಡನೆ, ಸಾಕ್ಷ್ಯ ಚಿತ್ರ, ಸೆಮಿನಾರ್ ಮಂಡನೆ, ಮಾದರಿ ಪ್ರದರ್ಶನ ಮುಂತಾದ ತರಗತಿಯ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಯಿತು. ಖೈರುನ್ನೀಸಾ, ರಕ್ಷಿತ್ ಕಾರ್ಯಕ್ರಮ ನಿರ್ವಹಿಸಿದರು.


