ಕುಂಬಳೆ: ಕರೊನಾ ಭೀತಿಯ ಹಿನ್ನೆಲೆಯಲ್ಲಿ ಮುಚ್ಚಲಾಗಿರುವ ಕೇರಳ-ಕರ್ನಾಟಕ ಗಡಿ ಪ್ರದೇಶವಾದ ತಲಪ್ಪಾಡಿಯಲ್ಲಿ ಅಗತ್ಯ ತುರ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಒತ್ತಾಯಿಸಿದ್ದಾರೆ.
ಕಾಸರಗೋಡು ಪ್ರಾಚೀನ ಕಾಲದಿಂದಲೂ ಭಾವನಾತ್ಮಕತೆ ಸಹಿತ ಎಲ್ಲಾ ವಿಭಾಗಗಳಲ್ಲೂ ದಕ್ಷಿಣ ಕನ್ನಡದೊಂದಿಗೆ ನೇರ ಸಂಪರ್ಕವನ್ನಿರಿಸಿಕೊಂಡ ಕರ್ನಾಟಕದ್ದೇ ಪ್ರದೇಶವಾಗಿತ್ತು. ಭಾಷಾವಾರು ಪ್ರಾಂತ್ಯ ವಿಭಜನೆಯ ಬಳಿಕ ಕೇರಳದೊಂದಿಗೆ ಸೇರಿ ಹೋದರೂ ವ್ಯಾವಹಾರಿಕವಾಗಿ ಈಗಲೂ ಮಂಗಳೂರಿನೊಂದಿಗೆ ನಿಕಟತೆ ಹೊಂದಿದೆ. ಎಲ್ಲಾ ಅಗತ್ಯಗಳಿಗೂ ಕಾಸರಗೋಡಿನ ಮಂದಿ ಮಂಗಳೂರನ್ನು ಆಶ್ರಯಿಸಿರುವವರಾಗಿದ್ದಾರೆ. ಜೊತೆಗೆ ಮಂಗಳೂರಿನ ಬೆಳವಣಿಗೆಗಳ ಹಿಂದೆ ಕಾಸರಗೋಡಿನ ಪಾಲೂ ಅರ್ಧದಷ್ಟಿದೆ. ಇದೀಗ ಕರೋನಾ ರೋಗ ಬಾಧೇಯ ಹಿನ್ನೆಲೆಯಲ್ಲಿ ಹೆದ್ದಾರಿ ಮುಚ್ಚಲ್ಪಟ್ಟಿರುವುದರಿಂದ ತುರ್ತು ಚಿಕಿತ್ಸೆ ಲಭ್ಯವಾಗದೆ ಜನಸಾಮಾನ್ಯರು ಸಾಯುತ್ತಿದ್ದಾರೆ. ಅಲ್ಲದೆ ಅಗತ್ಯ ಸೇವೆಗಳ ಲಭ್ಯತೆಯೂ ಮೊಟಕುಗೊಂಡು ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳಿಗೆ ಹೆದ್ದಾರಿ ಸಂಚಾರ ಮುಕ್ತಗೊಳಿಸಬೇಕೆಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಲಾಗಿದೆ.