ಕುಂಬಳೆ: ಲಾಕ್ ಡೌನ್ ಕಾರಣ ಜನಸಾಮಾನ್ಯರ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಹಲವರು ಸೇವಾ ತತ್ಪರರಾಗಿದ್ದು, ಸೀತಾಂಗೋಳಿ ನಿವಾಸಿ, ಕಾಞÂಂಗಾಡ್ ವಿಭಾಗ ಟ್ರಾಫಿಕ್ ಅಧೀಕ್ಷಕ ಪರಮೇಶ್ವರ ನಾಯ್ಕ್ ಬಾಳೆಗುಳಿ ಅಗತ್ಯವಿರುವವರಿಗೆ ಔಷಧಿಗಳನ್ನು ತಲಪಿಸುವ ಸೇವೆಯಲ್ಲಿ ನಿರತರಾಗಿದ್ದು ಜನಮನ್ನಣೆಗೆ ಪಾತ್ರರಾಗಿದ್ದಾರೆ.
ಲಾಕ್ ಡೌನ್ ಕಾರಣ ಜನಸಾಮಾನ್ಯರು ಔಷಧಿಯಂತಹ ಅತ್ಯಗತ್ಯ ವಸ್ತುಗಳ ಪೂರೈಕೆಗಾಗಿ ಪರಿತಪಿಸುತ್ತಿರುವುದು ಸಾಮಾನ್ಯವಾಗಿದೆ. ಹಲವಾರು ವ್ಯವಸ್ಥೆಗಳು ಜನಸಾಮಾನ್ಯರ ನೆರವಿಗಾಗಿ ರೂಪಿಸಲ್ಪಟ್ಟಿದ್ದರೂ ಗ್ರಾಮೀಣ ಮಟ್ಟದಲ್ಲಿ ಅಂತಹ ವ್ಯವಸ್ಥೆಗಳು ತಲಪುವಲ್ಲೂ ತೊಡಕಾಗುತ್ತಿದೆ. ಜೀವನಾವಶ್ಯಕ ಔಷಧಿಗಳ ನಿತ್ಯ ಬಳಕೆಗೊಳಗಾಗುವವರು ಈ ಸಂದರ್ಭ ವ್ಯಾಪಕ ಸಮಸ್ಯೆಗೊಳಗಾಗಿದ್ದು ಮೆಡಿಕಲ್ ಅಂಗಡಿಗಳಲ್ಲಿರುವ ಸರತಿ ಸಾಲುಗಳನ್ನು ನೋಡಿದರೆ ಗಾಬರಿಯೂ ಆಗುತ್ತದೆ.
ಇಂತಹ ಜಟಿಲ ಸ್ಥಿತಿಯಲ್ಲಿ ಕೈಲಾಗದ ಅಶಕ್ತರ ಔಷಧ ಪೂರೈಕೆಗಾಗಿ ಪರಮೇಶ್ವರ ನಾಯ್ಕ್ ಟೊಂಕಕಟ್ಟಿ ನಿಂತಿದ್ದಾರೆ. ನಿತ್ಯ ಕರ್ತವ್ಯ ಮುಗಿಸಿ ಮರಳುವಾಗ ಏನಿಲ್ಲವೆಂದರೂ ಬೇಡಿಕೆ ನೀಡಿದ 10-15 ಜನರ ಔಷಧಿಗಳನ್ನು ತರುತ್ತಿದ್ದಾರೆ. ನಿಶ್ಚಿತ ಕೇಂದ್ರಗಳಿಗೆ ಅವುಗಳನ್ನು ತಲಪಿಸಿ ಕೃತಾರ್ಥರಾಗುತ್ತಿದ್ದಾರೆ. ಖಾಕಿಯ ನಾವು ಗ್ರಹಿಸುವ ದರ್ಪದ ಒಳಗೆ ಇಂತಹದೊಂದು ಮಾನವೀಯತೆ ಗಮನ ಸೆಳೆಯುತ್ತದೆ.


