ಕಾಸರಗೋಡು: ಜಿಲ್ಲೆಯ ಆರೆಸ್ಸೆಸ್ನ ಹಿರಿಯ ಕಾರ್ಯಕರ್ತ, ಬಿಜೆಪಿ ಮುಖಂಡರಾಗಿರುವ ತಡೆಗಲ್ಲು ರಾಮಕೃಷ್ಣ ಭಟ್ ಯಾನೆ ಟಿ.ಆರ್.ಕೆ ಭಟ್ ಪೆರ್ಲ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮೊಬೈಲ್ ಕರೆ ಮಾಡಿ ಮಾತನಾಡುವ ಮೂಲಕ ಕೋವಿಡ್-19 ಸಂದಿಗ್ಧ ಕಾಲಘಟ್ಟದಲ್ಲಿ ಹಿರಿಯರೊಂದಿಗಿನ ತಮ್ಮ ಸಂಪರ್ಕ ಅಭಿಯಾನ ನಡೆಸಿ ಅಚ್ಛರಿ ಮೂಡಿಸಿದ್ದಾರೆ.
ಪೆರ್ಲದ ಯಶೋಮಂದಿರದಲ್ಲಿ ನೆಲೆಸಿರುವ ಟಿ.ಆರ್.ಕೆ ಭಟ್ ಅವರ ಮೊಬೈಲ್ ರಿಂಗಣಿಸುತ್ತಿದ್ದಂತೆ ಇವರ ಪುತ್ರ ಪ್ರಸಾದ್ ಕರೆಸ್ವೀಕರಿಸಿ ಮಾತನಾಡಿದರೆ, ಆ ಕಡೆಯಿಂದ'ಹಲ್ಲೋ ಟಿ.ಆರ್.ಕೆ ಭಟ್ ಹೇ ಕ್ಯಾ?', ಪುತ್ರನಿಂದ ಮೊಬೈಲ್ ಪಡೆದು 'ಜೀ ಹಾಂ, ಆಪ್ ಕೌನ್'ಎಂದು ಹಿಂದಿಯಲ್ಲೇ ಟಿ.ಆರ್.ಕೆ ಅವರು ಪ್ರತ್ಯುತ್ತರ ನೀಡಿದರೆ'ಮೇ ನರೇಂದ್ರ ಮೋದಿ ಹೂಂ'ಎಂಬ ಉತ್ತರ ಲಭಿಸಿತ್ತು.'ಹೋ ಆಪ್ ಮೋದಿಜಿ, ಹಮಾರಾ ಪ್ರಧಾನಮಂತ್ರಿಜೀ, ಬಹುತ್ ಖುಷ್ ಹುವಾ'ಹೀಗೆ ಐದಾರು ನಿಮಿಷಗಳ ಕಾಲ ಇವರಿಬ್ಬರ ಮಧ್ಯೆ ಸಂಭಾಷಣೆ ಮುಂದುವರಿದಿತ್ತು. ನರೇಂದ್ರ ಮೋದಿ ಅವರು ಭಟ್ಜಿ ಅವರ ಆರೋಗ್ಯ, ವ್ಯವಹಾರಗಳ ಬಗ್ಗೆ ವಿಚಾರಿಸಿದರು. 93ರ ಹರೆಯದ ಟಿ.ಆರ್.ಕೆ ಭಟ್ ಅವರ ಸಾಧನೆ ಬಗ್ಗೆ ಮಾಹಿತಿ ಕಲೆಹಾಕಿದ್ದ ಪ್ರಧಾನಿ ನೇರ ಮಾತಿಗಿಳಿದಿದ್ದರು. ಕಾಸರಗೋಡು ಜಿಲ್ಲೆಯಲ್ಲಿ ಆರೆಸ್ಸೆಸ್-ಬಿಜೆಪಿಯ ಬೆಳವಣಿಗೆಯಲ್ಲಿ ಟಿ.ಆರ್.ಕೆ ಅವರ ಪಾತ್ರದ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದ ಪ್ರಧಾನಿ, 'ನಿಮ್ಮಂತಹ ಹಿರಿಯರು ಮಾಡಿದ ನಿಸ್ವಾರ್ಥ ಸೇವೆ, ದೇಶದಲ್ಲಿ ಇಂದು ಪ್ರಜ್ವಲಿಸುವಂತಾಗಿದೆ. ನಿಮ್ಮ ಕೆಲಸಗಳ ಬಗ್ಗೆ ಕೇಳಿ ತಿಳಿದುಕೊಳ್ಳುವ ಭಾಗ್ಯ ನನ್ನದಾಗಿರುವುದಕ್ಕೆ ಸಂತೋಷವಿದೆ. ಮುಂದೆಯೂ ದೇಶ ಸೇವೆ ಮಾಡುವ ಆಯುಷ್ಯ, ಆರೋಗ್ಯವನ್ನು ದೇವರು ಕರುಣಿಸಲಿ'ಎಂದು ಹಾರೈಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಆರೆಸ್ಸೆಸ್-ಬಿಜೆಪಿ ಕಟ್ಟಿ ಬೆಳೆಸಿದ ಮಹಿನೀಯರಲ್ಲಿ ಟಿ.ಆರ್.ಕೆ ಭಟ್ ಒಬ್ಬರಾಗಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭ ಸೆರೆಮನೆವಾಸ ಅನುಭವಿಸಿದ್ದ ಟಿ.ಆರ್.ಕೆ ಭಟ್ ಅವರು ಹೋರಾಟದ ಮೂಲಕ ಸಮಾಜದಲ್ಲಿ ಉನ್ನತಿಗೇರಿದ್ದಾರೆ. ಎಣ್ಮಕಜೆ ಗ್ರಾಮ ಪಂಚಾಯಿತಿ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷರಾಗಿ ನಾನಾ ಸಂಘಟನೆಗಳಲ್ಲಿ ಸಕ್ರಿಯರಾಗಿ ಮಹತ್ವದ ಸಾಧನೆಗೆ ಕಾರಣಕರ್ತರಾಗಿದ್ದರು. ಒಂದು ಕ್ಷಣ ತಮ್ಮ ಕಣ್ಣುಗಳನ್ನೇ ನಂಬಲಾರದ ಸ್ಥಿತಿ ಟಿ.ಆರ್.ಕೆ ಅವರದ್ದಾಗಿತ್ತು. ವಿಶ್ವದ ನಂ.1 ನಾಯಕರೆನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಮಾತನಾಡಿದ್ದಾರೆ ಎಂದರೆ, ಜನಸಾಮಾನ್ಯರ ಬಗ್ಗೆ ಪ್ರಧಾನಿಗಿರುವ ಒಲವು ವ್ಯಕ್ತವಾಗಿದೆ. ಇದೆಂದಿಗೂ ಮರೆಯಲಾರದ ಅನುಭವ ಎಂದು ಟಿ.ಆರ್.ಕೆ ಭಟ್ ಬಣ್ಣಿಸಿದ್ದಾರೆ.
ವಯೋಸಹಜ ಅಸೌಖ್ಯ ಬಿಟ್ಟರೆ, ಉತ್ತಮ ಆರೋಗ್ಯವನ್ನು ಕಾಯ್ದುಕೊಂಡಿರುವ ಟಿ.ಆರ್.ಕೆ ಭಟ್ ಅವರು ಪೆರ್ಲದ 'ಯಶೋಮಂದಿರ'ದಲ್ಲಿ ಪತ್ನಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ.


