ಕಾಸರಗೋಡು: ಕೊರೋನಾ ಪ್ರತಿರೋಧ ಚಟುವಟಿಕೆಗಳ ಬಿರುಸಿನ ನಡುವೆಯೂ ಕ್ಯಾನ್ಸರ್ ರೋಗಿಯೊಬ್ಬರಿಗೆ ಮುಂಬಯಿಯಿಂದ ಔಷಧ ತರಿಸಿಕೊಡುವ ಮೂಲಕ ಕಾಸರಗೋಡು ಜಿಲ್ಲಾಡಳಿತೆ ಮತ್ತು ಆರೋಗ್ಯ ಇಲಾಖೆ ಕರ್ತವ್ಯ ಮೆರೆದಿವೆ.
ಕ್ಯಾನ್ಸರ್ ನ ಜೊತೆಗೆ ಮೂತ್ರಜನಕಾಂಗ ಸಂಬಂಧಿ ಅಸೌಖ್ಯದಿಂದ ಬಳಲುತ್ತಿರುವ ಕಯ್ಯೂರು-ಚೀಮೇನಿ ನಿವಾಸಿ ಸಜಿತಾ ಅವರಿಗೆ ಈ ರೀತಿ ಮುಂಬಯಿಯಿಂದ ಔಷಧ ತರಿಸಿಕೊಡಲಾಗಿದೆ. ಮುಂಬಯಿಯಿಂದ ತರಿಸಲಾಗುವ ಔಷಧವೊಂದೇ ಸಜಿತಾರ ಬದುಕಿಗೆ ಆಸರೆಯಾಗಿತ್ತು. ಆದರೆ ಲಾಕ್ ಡೌನ್ ಆದೇಶ ಜಾರಿಗೊಂಡ ಹಿನ್ನೆಲೆಯಲ್ಲಿ ಔಷಧ ರವಾನೆ ಅಸಾಧ್ಯವಾಗಿದ್ದು, ಸಜಿತಾ ಸಂಕಷ್ಟಕೊಳಗಾಗಿದ್ದರು. ಈ ಮಾಹಿತಿ ಗಮನಕ್ಕೆ ಬಂದತಕ್ಷಣ ಜಿಲ್ಲಾಡಳಿತೆ ಮತ್ತು ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಿದ್ದುವು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆದೇಶ ಪ್ರಕಾರ ಎಂಡೋಸಲ್ಫಾನ್ ಪುನರ್ವಸತಿ ಯೋಜನೆ ನೋಡೆಲ್ ಅಧಿಕಾರಿ ಡಾ.ರಾಮನ್ ಸ್ವಾತಿ ವಾಮನ್ ಅವರು ತಮ್ಮ ಯೋಜನೆಯ ಅನ್ವಯ ಈ ಔಷಧ ಲಭ್ಯತೆಗೆ ವ್ಯವಸ್ಥೆ ಮಾಡಿದ್ದರು. ಕಾರುಣ್ಯ ಫಾರ್ಮಸಿ ಮೂಲಕ ಔಷಧ ಲಭಿಸಿದೆ. ಸೋಮವಾರ ಸಂಜೆ ಸಜಿತಾರಿಗೆ ಔಷಧ ಹಸ್ತಾಂತರಿಸಲಾಗಿದೆ ಎಂದು ಡಾ.ರಾಮನ್ ಸ್ವಾತಿ ವಾಮನ್ ತಿಳಿಸಿದರು.
2015 ರಿಂದ ಸಜಿತಾ ಅಸೌಖ್ಯದಿಂದ ಬಳಲುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಅವರಿಗೆ ಬೇಕಾದ ಔಷಧ ಲಭಿಸದೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ಜೊತೆಗೆ ಸುಮಾರು ಒಂದು ಲಕ್ಷ ರೂ. ಮೌಲ್ಯದ ಔಷಧ ಇವರಿಗೆ ಬೇಕಾಗುತ್ತದೆ.
ಎಂಡೋಸಲ್ಫಾನ್ ಪುನರ್ವಸತಿ ಯೋಜನೆ ಮೂಲಕ ಯೋಜನೆಯ ಪಟ್ಟಿಯಲ್ಲಿರುವ ಎಲ್ಲ ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧ ಖಚಿತಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

