ಕಾಸರಗೋಡು: ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಚೆರ್ಕಳ ಸನಿಹದ ಬೇವಿಂಜೆ ತಿರುವಿನಲ್ಲಿ ಇಂದು ಸಂಜೆ ಮಗುಚಿಬಿದ್ದು ಸಣ್ಣಪ್ರಮಾಣದಲ್ಲಿ ಅನಿಲ ಸೋರಿಕೆಯುಂಟಾಗಿದ್ದು, ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಭಾರಿ ದುರಂತ ತಪ್ಪಿದೆ.
ಮಂಗಳೂರಿನಿಂದ ಕಣ್ಣೂರು ಭಾಗಕ್ಕೆ ಸಂಚರಿಸುತ್ತಿದ್ದ ಟ್ಯಾಂಕರ್ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದಿದ್ದು, ಕಂದಕಕ್ಕೆ ಉರುಳುವುದು ಕೂದಲೆಳೆಯ ಅಂತರದಿಂದ ತಪ್ಪಿತ್ತು. ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಕಾಸರಗೋಡಿನ ಮೂರು ಹಾಗೂ ಉಪ್ಪಳದ ಒಂದು ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿತ್ತು. ಈ ಪ್ರದೇಶದ ವಿದ್ಯುತ್ ಸಂಪರ್ಕ ವಿಚ್ಛೇದಿಸಲಾಗಿದ್ದು, ಸ್ಥಳೀಯರನ್ನು ಸುರಕ್ಷಿತ ಜಾಗಕ್ಕೆ ತೆರಳಲು ಸೂಚಿಸಲಾಗಿತ್ತು. ಈ ಹಾದಿಯಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಪಘಾತಕ್ಕೀಡಾದ ವಾಹನದಿಂದ ಅನಿಲವನ್ನು ಬೇರೆ ವಾಹನಕ್ಕೆ ವರ್ಗಾಯಿಸುವ ಕೆಲಸ ಮುಂದುವರಿದಿದೆ.