ಕಾಸರಗೋಡು: ಕೋವಿಡ್ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ 'ಮಾಶ್ ಯೋಜನೆ'ಯನ್ವಯ ಕರ್ತವ್ಯ ನಿರ್ವಹಣೆ ಸಂದರ್ಭ ಕೋವಿಡ್ಬಾಧಿಸಿ ಮೃತಪಟ್ಟ ಮುಕಾರಿಕಂಡ ನಿವಾಸಿ, ಸೂರಂಬೈಲ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಂ.ಪದ್ಮನಾಭ(45)ಅವರ ಕುಟುಂಬವನ್ನು ಸರ್ಕಾರ ದತ್ತುಪಡೆದುಕೊಳ್ಳಬೇಕು ಎಂದು ಪದ್ಮನಾಭ ಅವರ ಕುಟುಂಬ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಯನ್ವಯ ಕರ್ತವ್ಯಕ್ಕೆ ನಿಯೋಜಿಸಿದ್ದ ಸಂದರ್ಭ ಪದ್ಮನಾಭ ಅವರಿಗೆ ಕೋವಿಡ್ ಬಾಧಿಸಿದ್ದು, ಇವರ ಸಾವಿನ ಹೊಣೆಯನ್ನು ಸರ್ಕಾರ ವಹಿಸಬೇಕು. ಕುಟುಂಬಕ್ಕೆ ಏಕ ಆಸರೆಯಾಗಿದ್ದ ಪದ್ಮನಾಭ ಅವರ ಸಾವಿನಿಂದ ಕುಟುಂಬ ಕಂಗಾಲಾಗಿದೆ. ಇವರ ಕುಟುಂಬಕ್ಕೆ 50ಲಕ್ಷ ರೂ. ಪರಿಹಾರ ಒದಗಿಸುವಂತೆಯೂ ಆಗ್ರಹಿಸಿದ್ದಾರೆ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಇವರನ್ನು ಮಂಜೇಶ್ವರ ಗೋವಿಂದಪೈ ಸಮಾರಕ ಕಾಲೇಜಿನಲ್ಲಿ ಕಾರ್ಯಾಚರಿಸುವ ಕೋವಿಡ್ ಸೆಂಟರ್ಗೆ ದಾಖಲಿಸಲಾಗಿದ್ದು, ಯಾರೊಬ್ಬರಿಗೂ ಭೇಟಿಗೆ ಅವಕಾಶ ನೀಡಿರಲಿಲ್ಲ. ಉನ್ನತ ಚಿಕಿತ್ಸೆಗಾಗಿ ತನ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಮಾಡಿಕೊಂಡ ಮನವಿಯನ್ನೂ ಕೇಂದ್ರದ ಅಧಿಕಾರಿಗಳು ಪರಿಗಣಿಸಿರಲಿಲ್ಲ. ಇದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿರುವುದಾಗಿ ಸಂಬಂಧಿಕರು ದೂರಿದ್ದಾರೆ. ಕುಟುಂಬದವರಾದ ಜಯಚಂದ್ರನ್, ಹರೀಶ್, ಶಶಿಕುಮಾರ್, ಪುತ್ತಿಗೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಯಂತ ಪಾಟಾಳಿ ಉಪಸ್ಥಿತರಿದ್ದರು.