ಡೆಹ್ರಾಡೂನ್: ತನ್ನ ವಿವಾಹದ ಕಾರ್ಯಕ್ರಮದಲ್ಲಿ ಮಧ್ಯಪಾನ ವಿರೋಧಿಸಿದ ವಧುವಿನ ನಿರ್ಧಾರಕ್ಕೆ ಮೆಚುಗೆ ವ್ಯಕ್ತಪಡಿಸಿ ಉತ್ತರಾಖಂಡ್ ಪೊಲೀಸರು ನಗದು ಬಹುಮಾನ ನೀಡಿದ್ದಾರೆ.
ತೇಹ್ರಿ ಜಿಲ್ಲೆಯ ದೇವಪ್ರಯಾಗದಲ್ಲಿ ಈ ಘಟನೆ ನಡೆದಿದ್ದು, ಮಧ್ಯಪಾನವನ್ನು ವಿರೋಧಿಸಿದ್ದ ವಧುಗಳಿಗೆ 10,001 ರೂಪಾಯಿಗಳ ನಗದು ಬಹುಮಾನ ನೀಡಿದ್ದಾರೆ.
ಭುಲಿ (ಘರ್ ವಾಲಿ ಭಾಷೆಯಲ್ಲಿ ಸಹೋದರಿ ಎಂಬ ಅರ್ಥ) ಕನ್ಯಾದಾನ್ ಯೋಜನೆಯಡಿ ವಧುವಿಗೆ ನಗದುಬಹುಮಾನವನ್ನು ನೀಡಲಾಗಿದೆ.
ಪೊಲೀಸ್ ಠಾಣೆಯ ಸಿಬ್ಬಂದಿಯಿಂದಲೇ ಹಣವನ್ನು ಸಂಗ್ರಹಿಸಿ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕಾಕ್ಟೈಲ್ ಪಾರ್ಟಿಗಳನ್ನು ತಡೆಯುವುದಕ್ಕೆ ದೇವಪ್ರಯಾಗ್ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಸ್ಥಳೀಯ ಜನತೆಯನ್ನು ಸಂಪರ್ಕಿಸಿ, ಈ ಕ್ರಮ ಕೈಗೊಳ್ಳಲಾಗಿದೆ. ಮಧ್ಯಪಾನ ವಿರೋಧಿಸುವವರಿಗೆ ಉತ್ತೇಜನ ನೀಡುವುದರಿಂದ ವಿವಾಹ ಕಾರ್ಯಕ್ರಮಗಳಲ್ಲಿ ಮಧ್ಯಪಾನವನ್ನು ತಡೆಗಟ್ಟುವುದಕ್ಕೆ ಸಹಕಾರಿಯಾಗಲಿದೆ ಎಂಬುದನ್ನು ಸ್ಥಳೀಯರೂ ಒಪ್ಪಿದ್ದಾರೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಮಹಿಪಾಲ್ ರಾವತ್ ಹೇಳಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಮಧ್ಯಪಾನ ಹಲವು ಘರ್ಷಣೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಘರ್ಷಣೆಗಳನ್ನು ತಡೆಗಟ್ಟುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾವತ್ ಮಾಹಿತಿ ನೀಡಿದ್ದಾರೆ.