ತಿರುವಲ್ಲ : ಉತ್ತರ ಪ್ರದೇಶದ ಝಾನ್ಸಿಯಲ್ಲಿ ರೈಲು ಪ್ರಯಾಣದ ವೇಳೆ ಕ್ರೈಸ್ತ ಸನ್ಯಾಸಿನಿಯರಿಗೆ ಬಜರಂಗದಳದ ಕಾರ್ಯಕರ್ತರು ಕಿರುಕುಳ ನೀಡಿರುವುದನ್ನು ತೀವ್ರವಾಗಿ ಖಂಡಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ವಿಜಯನ್, 'ಸಂವಿಧಾನವು ಖಾತ್ರಿ ಪಡಿಸಿರುವ ವೈಯಕ್ತಿಕ ಹಕ್ಕುಗಳ ಸ್ವಾತಂತ್ರ್ಯವನ್ನು ಅಡ್ಡಿಪಡಿಸುವ ಮತ್ತು ಹಕ್ಕುಗಳನ್ನು ದುರ್ಬಲಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.
ಸಚಿವ ಅಮಿತ್ ಶಾ ಅವರು ಸಹ ಘಟನೆಯನ್ನು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಏನಿದು ಘಟನೆ: ಇಬ್ಬರು ಮಹಿಳೆಯರನ್ನು ಬಲವಂತದ ಧಾರ್ಮಿಕ ಮತಾಂತರ ಮಾಡಲು ಕ್ರೈಸ್ತ ಸನ್ಯಾಸಿಯರು ರೈಲಿನಲ್ಲಿ ಕರೆದೊಯ್ಯುತ್ತಿದ್ದಾರೆ ಎಂದು ಬಜರಂಗದಳದ ಕಾರ್ಯಕರ್ತರು ಆರೋಪಿಸಿ ದೂರಿದ್ದರು. ಸನ್ಯಾಸಿಯರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿದುಬಂತು. ತಕ್ಷಣವೇ ಸನ್ಯಾಸಿಯರನ್ನು ಬಿಡುಗಡೆ ಮಾಡಿ ಬೇರೊಂದು ರೈಲಿನಲ್ಲಿ ಒಡಿಶಾಕ್ಕೆ ಕಳುಹಿಸಲಾಗಿದೆ' ಎಂದು ಝಾನ್ಸಿಯ ಪೊಲೀಸರು ತಿಳಿಸಿದ್ದಾರೆ.






