ಕೊರೊನಾ ಸೋಂಕು ಪ್ರಸಾರ ತಡೆಗಟ್ಟುವ ದಿಸೆಯಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿರುವ ರಾತ್ರಿ ಕಫ್ರ್ಯೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ನಗರ ಪ್ರದೇಶ ಸಹಿತ ಎಲ್ಲೆಡೆ ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗೆ ಕಫ್ರ್ಯೂ ವಿಧಿಸಿರುವುದರಿಂದ ನಿಜಕ್ಕೂ ಸೋಂಕು ಪ್ರಸಾರ ತಡೆ ಸಾಧ್ಯವಿದೆಯೇ? ಕೊರೊನಾ ಸಾಂಕ್ರಾಮಿಕವು ರಾತ್ರಿ 9 ರ ಬಳಿಕ ದಾಳಿ ಮಾಡಿ ಬೆಳಿಗ್ಗೆ ಐದು ಗಂಟೆಗೆಲ್ಲಾ ಮಾಯ ಆಗಿಬಿಡುತ್ತದೆಯೇ? ತಿರುವನಂತಪುರ, ಎರ್ನಾಕುಳಂ, ಕೋಝಿಕ್ಕೋಡು, ಕಣ್ಣೂರು, ಕಾಸರಗೋಡು ಸಹಿತ ಎಲ್ಲಾ ಜಿಲ್ಲೆಗಳಲ್ಲೂ ರಾತ್ರಿಯ ವೇಳೆ ಕೊರೊನಾ ಹೆಚ್ಚು ವ್ಯಾಪಿಸುತ್ತಿದೆಯೇ? ಸರ್ಕಾರದ ಈ ನಿರ್ಧಾರವು ತರ್ಕಹೀನ ಮತ್ತು ಅವೈಜ್ಞಾನಿಕ ಎನ್ನದೇ ನಿರ್ವಾಹವಿಲ್ಲ. ಈ ಹಿಂದೆಯೂ ಹೀಗೆ ರಾತ್ರಿ ಕಫ್ರ್ಯೂ ವಿಧಿಸಲಾಗಿತ್ತು. ಆದರೆ ಅದರಿಂದ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ ಎನ್ನುವ ವಾಸ್ತವವನ್ನು ಸರ್ಕಾರ ಮರೆಯಬಾರದು. ಎಲ್ಲರಿಗೂ ಕೋವಿಡ್ ಲಸಿಕೆ ಹಾಕಿಸುವುದಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಆದರೆ, ಈ ದಿಸೆಯಲ್ಲಿ ನಿರೀಕ್ಷಿತ ವೇಗದಲ್ಲಿ ಕೆಲಸ ಆಗುತ್ತಿಲ್ಲ. ರಾತ್ರಿ 9ರ ಬಳಿಕ ಊಟ- ತಿಂಡಿಗೆಂದು ಹೊರಗೆ ಓಡಾಡುವವರಿಂದ ಕೊರೊನಾ ಹೆಚ್ಚುತ್ತಿದೆ ಎಂದು ಸರ್ಕಾರ ತಿಳಿದುಕೊಂಡಿದ್ದರೆ ಅದರಷ್ಟು ಮೂರ್ಖತನ ಇನ್ನೊಂದಿಲ್ಲ. ರಾಜ್ಯದ ಹಲವೆಡೆ ಧಾರ್ಮಿಕ ಕಾರ್ಯಕ್ರಮಗಳು ಯಾವುದೇ ತಡೆಯಿಲ್ಲದೆ ನಡೆಯುತ್ತಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಎಗ್ಗಿಲ್ಲದೆ ನಡೆದಿದ್ದು, ಒಂದು ಲೋಕಸಭಾ ಕ್ಷೇತ್ರಕ್ಕೂ ಜೊತೆಗೆ ಚುನಾವಣೆ ಬಿರುಸಿನಿಂದಲೇ ನಡೆದಿತ್ತು. ಆಡಳಿತಾರೂಢ ಪಕ್ಷದ ನಾಯಕರು ಹಾಗೂ ಸಚಿವರು, ಪ್ರತಿಪಕ್ಷಗಳ ನಾಯಕರು, ಅದೂ ಕೇಂದ್ರ ನೇತಾರುಗಳ ದಿವ್ಯ ಸಾನ್ನಿಧ್ಯದಲ್ಲಿ ಬೀಡು ಬಿಟ್ಟು ಸಾವಿರಾರು ಜನರನ್ನು ಗುಂಪು ಸೇರಿಸಿ ಪ್ರಚಾರ ನಡೆಸಿದ್ದ ಪರಿ ಇನ್ನು ಮುಂದೆ ಚುನಾವಣೆಗಳು ನಡೆಯುವುದಿಲ್ಲವೋ, ಇದೇ ಕೊನೇ ಚುನಾವಣೆಯೋ ಎಂಬ ಸಂಶಯಕ್ಕೂ ಕಾರಣವಾಗಿತ್ತು!. ರಾಜಕೀಯ ರ್ಯಾಲಿಗಳು ಮತ್ತು ಧಾರ್ಮಿಕ ಸಮಾವೇಶಗಳಿಂದ ಕೊರೊನಾ ಹರಡುವುದಿಲ್ಲ ಎಂದು ಸರ್ಕಾರ ಭಾವಿಸಿದೆಯೇ? ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಪ್ರಚಾರ ಮಾಡಲು ಪ್ರತ್ಯೇಕ ಐ.ಟಿ. ಘಟಕಗಳನ್ನೇ ಹೊಂದಿರುವ ರಾಜಕೀಯ ಪಕ್ಷಗಳು, ಈಗ ಚುನಾವಣಾ ಪ್ರಚಾರಕ್ಕೆ ಸಾವಿರಾರು ಜನರನ್ನು ಸೇರಿಸುವ ಬದಲು ಮತದಾರರನ್ನು ವಾಟ್ಸ್ಆಯಪ್, ಮೊಬೈಲ್ ದೂರವಾಣಿ ಕರೆ, ಸಾಮಾಜಿಕ ಜಾಲತಾಣಗಳ ಮೂಲಕವೇ ತಲುಪಿದ್ದರೆ ಒಳ್ಳೆಯದಿದ್ದೆಂದು ಅವರ ತಲೆಗೆ ಯಾಕಾಗಿ ಹೊಳೆದಿಲ್ಲ ಎಂಬುದು ಅರ್ಥವಾಗದ ಪ್ರಶ್ನೆಯಾಗಿ ಯಾವಾಗಲೂ ಕಾಡುತ್ತದೆ. ಅಂತಹ ನಿರ್ಧಾರ ಕೈಗೊಳ್ಳುವ ಮೂಲಕ ಕೊರೊನಾ ಸೋಂಕು ಪ್ರಸಾರ ತಡೆಯಲು ಎಲ್ಲ ರಾಜಕಾರಣಿಗಳೂ ತಮ್ಮ ಬದ್ಧತೆಯನ್ನು ಪ್ರದರ್ಶಿಸಬಹುದಿತ್ತÀಲ್ಲವೇ? ಸಾರ್ವಜನಿಕರು ಕೂಡ ತಮ್ಮ ಹೊಣೆಯರಿತು, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು.
ಈ ಮಧ್ಯೆ ಕೊರೊನಾ ತಡೆಗೆ ಹಲವು ಜಿಲ್ಲಾಧಿಕಾರಿಗಳು ಮನಸೋ ಇಚ್ಛೆ ಕ್ರಮಗಳನ್ನು ಕೈಗೊಂಡ ವರದಿಗಳು ಬಂದಿವೆ. ಕಾಸರಗೋಡಿನ ಜಿಲ್ಲಾಧಿಕಾರಿಗಳಂತೂ ತುಘಲಕ್ ನನ್ನು ನೆನಪಿಸುವ ಏಕಪಕ್ಷೀಯ ನಿರ್ಧಾರ ಕೈಗೊಂಡು ಬಳಿಕ ಭಾರೀ ಪ್ರತಿರೋಧದ ಕಾರಣ ನಾನು ಹಾಗೆಂದಿಲ್ಲ ಎಂಬ ಉತ್ತರವನ್ನೂ ನೀಡಿದ್ದು ಇನ್ನೂ ಹಸಿರಾಗಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಜನರು ಒಟ್ಟು ಸೇರುತ್ತಿರುವುದೇನೂ ಕಡಿಮೆಯಾಯಿತೆಂದು ಭಾವಿಸಿದ್ದೀರಾ? ಒಮ್ಮೆ ಪೇಟೆಗಳತ್ತ ಕಣ್ಣು ಹಾಯಿಸಿದರೆ ಮೈ ಜುಮ್ಮೆನ್ನುವ ದೃಶ್ಯಗಳು ಈಗಲೂ ಕಾಣಿಸುತ್ತಿವೆ.
ಮುಖ್ಯಮಂತ್ರಿ ಅಥವಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಅನುಮತಿಯಿಲ್ಲದೆ ಜಿಲ್ಲಾಡಳಿತವು ಕೋವಿಡ್ ನಿಯಂತ್ರಣದ ಆದೇಶಗಳನ್ನು ಹೊರಡಿಸುವಂತಿಲ್ಲ ಎಂದು ಖುದ್ದು ಸರ್ಕಾರವೇ ಪ್ರಕಟಿಸಿದ ಬಳಿಕವೂ ಹಲವು ಜಿಲ್ಲೆಗಳಲ್ಲಿ ಇಂತಹ ಕ್ರಮಗಳನ್ನು ಕೈಗೊಂಡಿದ್ದುದು, ಸೋಂಕು ಪ್ರಸರಣ ತಡೆಯಲ್ಲಿ ಸರ್ಕಾರದ ಅಂಗಸಂಸ್ಥೆಗಳ ಮಧ್ಯೆಯೇ ಸಮನ್ವಯವಿಲ್ಲ ಎನ್ನುವುದನ್ನು ಸೂಚಿಸುತ್ತದೆ. ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯು ಪರಿಸ್ಥಿತಿಯನ್ನು ಗಂಭೀರವಾಗಿಸಿದೆ. ಆದರೆ ಅದರ ನಿಯಂತ್ರಣದ ವಿಷಯದಲ್ಲಿ ಹೊಂದಿರುವ ಗೊಂದಲಗಳಿಂದ ಸರ್ಕಾರ ಮೊದಲು ಹೊರಬರಬೇಕು. ರಾತ್ರಿ ಕಫ್ರ್ಯೂವಿನಂತಹ ಅರ್ಥಹೀನ ಕ್ರಮಗಳನ್ನು ಕೈಬಿಟ್ಟು ಎಲ್ಲರಿಗೂ ಶೀಘ್ರವೇ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಈ ಮಧ್ಯೆ ಲಸಿಕೆಗಾಗಿ ಜನರು ಕೇಂದ್ರಗಳಲ್ಲಿ ಗುಂಪುಗೂಡುವುದು, ಗೊಂದಲ-ಗದ್ದಲಗಳು ತೀವ್ರ ಕಳವಳಕಾರಿಯಾಗುತ್ತಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೋವಿಡ್ ರೋಗಿಯೊಬ್ಬರು ಮೃತಪಟ್ಟ ದಾರುಣ ಘಟನೆಯೂ ಆಡಳಿತದಲ್ಲಿ ಸಮನ್ವಯದ ಕೊರತೆ ಇದೆ ಎನ್ನುವುದನ್ನೇ ಬಿಂಬಿಸಿದೆ.





