ಕವರತ್ತಿ: ಬಿಜೆಪಿ ನಾಯಕರು ದಾಖಲಿಸಿದ್ದ ದೇಶದ್ರೋಹ ಪ್ರಕರಣದಿಂದ ಲಕ್ಷದ್ವೀಪ ಮೂಲದ ನಟಿ-ಮಾಡೆಲ್ ಆಯಿಷಾ ಸುಲ್ತಾನರವರಿಗೆ ಕೇರಳದ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ದೇಶದ್ರೋಹದ ಪ್ರಕರಣವನ್ನು ಎದುರಿಸುತ್ತಿರುವ ಆಯಿಷಾಗೆ ಸೆಕ್ಷನ್ 41ಎ ಸಿಆರ್ಪಿಸಿ ನೋಟಿಸ್ ಅಡಿಯಲ್ಲಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಹೇಳಿದೆ. ಒಂದು ವೇಳೆ ಪೊಲೀಸರು ಆಕೆಯನ್ನು ಬಂಧಿಸಿದರೆ, ಬಂಧನದ ಬಳಿಕ ಆಕೆಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ
ಆಯಿಷಾ ವಿರುದ್ಧ ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ಅಬ್ದುಲ್ ಖಾದರ್ ಕವರತ್ತಿ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ ಮಲಯಾಳಂ ಟಿವಿ ಚಾನೆಲ್ನಲ್ಲಿ ಚರ್ಚಾ ಕಾರ್ಯಕ್ರಮದ ವೇಳೆ, ಲಕ್ಷದ್ವೀಪದಲ್ಲಿ ಕರೊನಾ ಹರಡಿಸಲು ಕೇಂದ್ರ ಸರ್ಕಾರ ಜೈವಿಕ ಅಸ್ತ್ರ ಬಳಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಎಂದು ಉಲ್ಲೇಖವಾಗಿದೆ.
ನಟಿಯ ಆರೋಪವೇನು?
ಲಕ್ಷದ್ವೀಪದಲ್ಲಿ ಕರೊನಾ ಶೂನ್ಯ ಪ್ರಕರಣಗಳಿದ್ದವು. ಇಂದು ದಿನವೊಂದಕ್ಕೆ 100 ಪ್ರಕರಣಗಳು ವರದಿಯಾಗುತ್ತಿವೆ. ಇದು ಕೇಂದ್ರ ಸರ್ಕಾರ ಜೈವಿಕ ಅಸ್ತ್ರದ ಪರಿಣಾಮ ಎಂದು ಡಿಬೇಟ್ ಕಾರ್ಯಕ್ರಮವೊಂದರಲ್ಲಿ ಆಯಿಷಾ ಸುಲ್ತಾನ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿರುವ ಬಿಜೆಪಿ ಅಧ್ಯಕ್ಷ ಆಯಿಷಾ ಅವರ ಹೇಳಿಕೆ ದೇಶದ್ರೋಹದ್ದಾಗಿದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು.
ಕವರತ್ತಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರಕಾರ ಭಾರತೀಯ ದಂಡ ಸಂಹಿತೆಯ 124 ಎ (ದೇಶದ್ರೋಹ) ಮತ್ತು 153 ಬಿ (ದ್ವೇಷ ಭಾಷಣ) ಸೆಕ್ಷನ್ ಅಡಿಯಲ್ಲಿ ಆಯಿಷಾ ಸುಲ್ತಾನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಐಶಾ ಸುಲ್ತಾನ ಅವರು ಲಕ್ಷದ್ವೀಪದ ಚೆತಿಯಾತ್ ದ್ವೀಪದ ನಿವಾಸಿ. ಲಕ್ಷದ್ವೀಪ ಮೂಲದ ಮಾಡೆಲ್ ಮತ್ತು ನಟಿ ಆಗಿರುವ ಆಯಿಷಾ ಸುಲ್ತಾನ ಮಲಯಾಳಂ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.