ಅಹಮದಾಬಾದ್: ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹರಿಕೃಷ್ಣ ಡೈಮಂಡ್ ಕಂಪನಿಯ ಮಾಲೀಕ ಸೂರತ್ನ ಐವತ್ತೊಂಬತ್ತು ವರ್ಷದ ಸಾವ್ಜಿ ಧೋಲಾಕಿಯಾ ಅವರು ಈಗ ಮತ್ತೆ ಸುದ್ದಿಯಾಗಿದ್ದಾರೆ.
ಸಾವ್ಜಿ ಧೋಲಾಕಿಯಾ ಅವರಿಗೆ ಅವರ ಕುಟುಂಬ ಉಡುಗೊರೆಯಾಗಿ ನೀಡಿದ 50 ಕೋಟಿ ರೂ.ಬೆಲೆಯ ಹೊಚ್ಚಹೊಸ ಹೆಲಿಕಾಪ್ಟರ್ ಅನ್ನು ಅವರು ಸೂರತ್ನ ವೈದ್ಯಕೀಯ ಮತ್ತು ಇತರ ತುರ್ತು ಪರಿಸ್ಥಿತಿಗಳಿಗಾಗಿ ಕೊಡುಗೆಯಾಗಿ ನೀಡಿದ್ದಾರೆ.
ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪಡೆದ ನಂತರ ಧೋಲಾಕಿಯಾ ಅವರಿಗೆ ಅವರ ಕುಟುಂಬ ಸದಸ್ಯರು ಹೆಲಿಕಾಪ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಧೋಲಾಕಿಯಾ ಅವರು ಕೆಲವು ದಿನಗಳಿಂದ ಸೂರತ್ನ ಜನರಿಗೆ ಹೆಲಿಕಾಪ್ಟರ್ ಅನ್ನು ಉಡುಗೊರೆಯಾಗಿ ನೀಡಲು ಯೋಜಿಸಿದ್ದರು. ಆದರೆ ಆಶ್ಚರ್ಯಕರ ರೀತಿಯಲ್ಲಿ ಹೆಲಿಕಾಪ್ಟರ್ ಅನ್ನೇ ಉಡುಗೊರೆಯನ್ನು ಸ್ವೀಕರಿಸಿದ ನಂತರ ಅವರು ಅದನ್ನೇ ಸೂರತ್ ಜನತೆಗೆ ಕೊಡುಗೆಯಾಗಿ ನೀಡಿದ್ದಾರೆ.
"ನನ್ನ ಕುಟುಂಬವು ಇಷ್ಟು ದೊಡ್ಡ ಆಶ್ಚರ್ಯಕರ ಉಡುಗೊರೆಯನ್ನು ನೀಡುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಕುಟುಂಬದಿಂದ ಉಡುಗೊರೆಯನ್ನು ನಾನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ನಾನು ಅದನ್ನು ಸಾಮಾಜಿಕ ಉದ್ದೇಶಕ್ಕಾಗಿ ಕೊಡುಗೆಯಾಗಿ ನೀಡಲು ಮನಃಪೂರ್ವಕವಾಗಿ ನಿರ್ಧರಿಸಿದೆ" ಎಂದು ಅವರು ಹೇಳಿದ್ದಾರೆ.
"ಸೂರತ್ ಗುಜರಾತ್ನ ಆರ್ಥಿಕ ರಾಜಧಾನಿಯಾಗಿದೆ. ಆದರೆ ತನ್ನದೇ ಆದ ಹೆಲಿಕಾಪ್ಟರ್ ಹೊಂದಿಲ್ಲ. ಹೀಗಾಗಿ, ನಾನು ಈ ಉಡುಗೊರೆಯನ್ನು ಸೂರತ್ನ ಜನರಿಗೆ ಮತ್ತು ಸಾಮಾಜಿಕ ಉದ್ದೇಶಕ್ಕಾಗಿ ಅರ್ಪಿಸುತ್ತಿದ್ದೇನೆ" ಎಂದು ತಮ್ಮ ಜೀವನವನ್ನು ನೀರಿನ ಸಂರಕ್ಷಣೆ ಮತ್ತು ಕೊಳಗಳನ್ನು ನಿರ್ಮಿಸಲು ಮುಡಿಪಾಗಿಟ್ಟ ಧೋಲಾಕಿಯಾ ಹೇಳಿದ್ದಾರೆ.