ಕಾಸರಗೋಡು: ಪ್ರೆಸ್ ಕ್ಲಬ್ ಕಾಸರಗೋಡು ವತಿಯಿಂದ ಕೊಡಮಾಡುವ ಕೆ. ಕೃಷ್ಣನ್ ಸ್ಮಾರಕ ಮಾಧ್ಯಮ ಪ್ರಶಸ್ತಿ ಪತ್ರಕರ್ತ ಟಿ.ರಾಜನ್ ಆಯ್ಕೆಯಾಗಿದ್ದಾರೆ. ಮಾತೃಭೂಮಿ ಚೆರ್ವತ್ತೂರು ವರದಿಗಾರರಾಗಿರುವ ಇವರನ್ನು ಹಿರಿಯ ಪತ್ರಕರ್ತರಾದ ಸನ್ನಿಜೋಸೆಫ್, ಕೆ.ಎ ಆಂಟನಿ ಹಾಗೂ ಓ.ಸಿ ಮೋಹನ್ರಾಜ್ ಅವರನ್ನೊಳಗೊಂಡ ಜೂರಿ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಫೆ. 11ರಂದು ಬೆಳಗ್ಗೆ 11ಕ್ಕೆ ಕಾಸರಗೋಡು ಪ್ರೆಸ್ಕ್ಲಬ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಶಾಸಕ ಸಿ.ಎಚ್ ಕುಞಂಬು ಪ್ರಶಸ್ತಿ ಪ್ರದಾನ ನಡೆಸುವರು. ಕೆ.ಟಿ ಶಶಿ ಸಂಸ್ಮರಣಾ ಭಾಷಣ ಮಾಡುವರು. ಪ್ರಶಸ್ತಿ ಹತ್ತು ಸಾವಿರ ರೂ. ನಗದು ಹಾಗೂ ಪ್ರಶಸ್ತಿಫಲಕ, ಸ್ಮರಣಿಕೆ ಒಳಗೊಂಡಿದೆ. ಕೋವಿಡ್ ರೋಗದ ವಿರುದ್ಧ ನಡೆಸಿದ ಹೋರಾಟವನ್ನು ಮುಖ್ಯ ವಸ್ತುವಾಗಿಸಿಕೊಂಡು ರಚಿಸಲಾದ ಬರಹಗಳನ್ನು ಈ ಬಾರಿ ಪ್ರಶಸ್ತಿಗೆ ಪರಿಗಣಿಸಲಾಗಿತ್ತು.