ವಿಶ್ವಸಂಸ್ಥೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಮಂಡಿಸಿದ ನಿರ್ಣಯದ ವಿಷಯವಾಗಿ ಭಾರತ ಹೊರಗುಳಿಯಿತು. ಉಕ್ರೇನ್ ಹಾಗೂ ಅದರ ಮಿತ್ರ ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಉಕ್ರೇನ್ ನಲ್ಲಿ ಉಂಟಾಗಿರುವ ಮಾನವ ಬಿಕ್ಕಟ್ಟಿನ ಬಗ್ಗೆ ನಿರ್ಣಯವನ್ನು ಮಂಡಿಸಿತ್ತು.
"ಹಗೆತನ ನಿವಾರಿಸುವುದು ಮತ್ತು ತುರ್ತು ಮಾನವೀಯ ನೆರವು ನೀಡುವುದು ಉಕ್ರೇನ್ ವಿಷಯದಲ್ಲಿ ಗಮನ ಕೇಂದ್ರೀಕರಿಸಬೇಕಾಗಿದೆ" ಎಂದು ಭಾರತ ಹೇಳಿದೆ.
193 ಸದಸ್ಯರು ಇರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಉಕ್ರೇನ್ ಹಾಗೂ ಮಿತ್ರ ರಾಷ್ಟ್ರಗಳು ಮಂಡಿಸಿರುವ ಉಕ್ರೇನ್ ವಿರುದ್ಧದ ಆಕ್ರಮಣದ ಮಾನವೀಯ ಪರಿಣಾಮಗಳು ಎಂಬ ಕರಡು ನಿರ್ಣಯವನ್ನು ಅಂಗೀಕರಿಸಿದ್ದು, ನಿರ್ಣಯದ ಪರವಾಗಿ 140 ರಾಷ್ಟ್ರಗಳು ಮತಚಲಾಯಿಸಿದ್ದರೆ 5 ರಾಷ್ಟ್ರಗಳು ವಿರುದ್ಧವಾಗಿ 38 ರಾಷ್ಟ್ರಗಳು ಮತ ಚಲಾವಣೆಯಿಂದ ದೂರ ಉಳಿಯಲು ನಿರ್ಧರಿಸಿದವು.
ನಿರ್ಣಯದ ಬಗ್ಗೆ ಮತ ಚಲಾಯಿಸುವುದರಿಂದ ಭಾರತ ದೂರ ಉಳಿಯಲಿದೆ. "ವಿಶ್ವಸಂಸ್ಥೆಯಲ್ಲಿನ ಶ್ರಮ ಸಂಘರ್ಷದ ಪರಿಸ್ಥಿತಿಯನ್ನು ತಿಳಿಗೊಳಿಸುವುದಕ್ಕೆ ಸಹಕಾರಿಯಾಗಬೇಕು ಹಾಗೂ ಸಂವಾದವನ್ನು ಉತ್ತೇಜಿಸಲು ಹಗೆತನವನ್ನು ತಕ್ಷಣವೇ ನಿಲ್ಲಿಸಲು ಅನುಕೂಲ ಮಾಡುವಂತಿರಬೇಕು ಎಂದು ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಹೇಳಿದ್ದಾರೆ.