ನವದೆಹಲಿ: ಸುಪ್ರೀಂಕೋರ್ಟ್ನಲ್ಲಿ ಕನಿಷ್ಠ ಒಂದು ಸಾಂವಿಧಾನಿಕ ಪೀಠವಾದರೂ ವರ್ಷವಿಡೀ ಕಾರ್ಯನಿರ್ವಹಿಸುವಂತೆ ಮಾಡುವುದನ್ನು ಮೊದಲ ಆದ್ಯತೆಯಾಗಿ ಪ್ರಯತ್ನಿಸುವೆ ಎಂದು ನೂತನ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಶುಕ್ರವಾರ ತಿಳಿಸಿದರು.
49ನೇ ಸಿಜೆಐ ಆಗಿ ಶನಿವಾರ ಅಧಿಕಾರ ಸ್ವೀಕರಿಸಲಿರುವ ನ್ಯಾ. ಲಲಿತ್ ಅವರು, ತಮಗಿರುವ 74 ದಿನಗಳ ಅಧಿಕಾರಾವಧಿಯಲ್ಲಿ ಹೆಚ್ಚು ಗಮನ ಹರಿಸಿ ಕೆಲಸ ಮಾಡಲು ಉದ್ದೇಶಿಸಿರುವ ಮೂರು ಕ್ಷೇತ್ರಗಳನ್ನು ಪ್ರಸ್ತಾಪಿಸಿದರು. ಉಳಿದ ಎರಡು ಕ್ಷೇತ್ರಗಳೆಂದರೆ, ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಅರ್ಜಿಗಳ ಪಟ್ಟಿ ಮಾಡುವುದು ಮತ್ತು ತುರ್ತು ವಿಷಯಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿದೆ. ನ್ಯಾಯದಾನ ಪ್ರಕ್ರಿಯೆಯನ್ನು ಸರಳ, ಸ್ಪಷ್ಟ ಮತ್ತು ಸಾಧ್ಯವಾದಷ್ಟು ಪಾರದರ್ಶಕವಾಗಿಸಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.
ನಿರ್ಗಮಿತ ಸಿಜೆಐ ನ್ಯಾ.ಎನ್.ವಿ. ರಮಣ ಅವರಿಗೆ ಬೀಳ್ಕೊಡುಗೆ ನೀಡಲು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ ಬಿಎ) ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾ.ಎನ್.ವಿ. ರಮಣ ಅವರಿಗೆ ನ್ಯಾಯದಾನ ಪ್ರಕ್ರಿಯೆ ಹಾಗೂ ಕಾಯ್ದೆಗಳನ್ನು ಬಳಸುವಲ್ಲಿ ಸುಪ್ರೀಂಕೋರ್ಟ್ನ ಪಾತ್ರದ ಬಗ್ಗೆ ನಂಬಿಕೆ ಇತ್ತು. ಅಲ್ಲದೇ, ಸಾಂವಿಧಾನಿಕ ವಿಷಯಗಳು ಬಂದಾಗ ತಕ್ಷಣವೇ ವಿಸ್ತೃತ ಪೀಠಗಳಿಗೆ ವರ್ಗಾಯಿಸಿ, ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗುವಂತೆ ನೋಡಿಕೊಳ್ಳುತ್ತಿದ್ದರು ಎಂದರು.