ಸುಂದರ್ನಗರ: ಚಿಕ್ಕ ರಾಜ್ಯವೆಂಬ ಕಾರಣಕ್ಕಾಗಿ ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಸಮೀಪಿಸಿರುವಂತೆಯೇ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಮಂಡಿ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಂದು ಮತವು ಮುಂದಿನ 25 ವರ್ಷಗಳ ರಾಜ್ಯದ ಅಭಿವೃದ್ಧಿ ಪಯಣವನ್ನು ವ್ಯಾಖ್ಯಾನಿಸಲಿದೆ ಎಂದು ಹೇಳಿದರು.
ಸ್ವಾತಂತ್ರ್ಯದ ನಂತರ ರಕ್ಷಣಾ ವಲಯದಲ್ಲೂ ಕಾಂಗ್ರೆಸ್ ಸಾವಿರಾರು ಕೋಟಿ ರೂಪಾಯಿ ಹಗರಣ ನಡೆಸಿದೆ ಎಂದು ಮೋದಿ ಆರೋಪಿಸಿದರು. ರಕ್ಷಣಾ ವಿಭಾಗದಲ್ಲಿ ದೇಶವು ಸ್ವಾವಲಂಬಿಯಾಗಬೇಕು ಎಂದು ಕಾಂಗ್ರೆಸ್ ಎಂದಿಗೂ ಬಯಸಲಿಲ್ಲ. ಪ್ರತಿ ರಕ್ಷಣಾ ಒಪ್ಪಂದದಲ್ಲಿ ಕಮಿಷನ್ ಬಯಸಿತ್ತು. ತನ್ನ ನಾಯಕರ ಬೊಕ್ಕಸ ತುಂಬುವುದು ಕಾಂಗ್ರೆಸ್ ಗುರಿಯಾಗಿತ್ತು. ಇದರಿಂದಾಗಿ ಶಸ್ತ್ರಾಸ್ತ್ರ ಖರೀದಿ ವಿಳಂಬವಾಗುತ್ತಿತ್ತು ಎಂದು ಹೇಳಿದರು.
ಇದರಿಂದ ಯಾರು ಅತಿ ಹೆಚ್ಚು ನೋವು ಅನುಭವಿಸಿದರು? ತಮ್ಮ ಮಕ್ಕಳನ್ನು ಗಡಿಗೆ ಕಳುಹಿಸಿದ ಹಿಮಾಚಲ ಪ್ರದೇಶದ ಧೈರ್ಯಶಾಲಿ ತಾಯಂದಿರು ಹೆಚ್ಚು ನೋವನ್ನು ಅನುಭವಿಸಿದರು. ಸಹೋದರಿಯರು ತಮ್ಮ ಸಹೋದರರನ್ನು ಕಳೆದುಕೊಂಡರು ಎಂದು ಪ್ರಧಾನಿ ಮೋದಿ ಹೇಳಿದರು.