ನವದೆಹಲಿ: ವಾರಾಣಸಿಯಿದ ಅಸ್ಸಾಂನ ದಿಬ್ರೂಗಢದ ವರೆಗೆ ಬಾಂಗ್ಲಾದೇಶದ ಮೂಲಕ ಸಾಗುವ ದೇಶದ ಅತ್ಯಂತ ದೊಡ್ಡ ಐಷಾರಾಮಿ ನೌಕೆಗೆ ಪ್ರಧಾನಿ ನರೇಂದ್ರ ಮೋದಿ ಜನವರಿ 13ರಂದು ವಾರಾಣಸಿಯಲ್ಲಿರುವ ಗಂಗಾ ನದಿಯ ಸಂತ ರವಿದಾಸ್ ಘಾಟ್ನಲ್ಲಿ ಚಾಲನೆ ನೀಡಲಿದ್ದಾರೆ.
ಇದು ಪ್ರವಾಸೋದ್ಯಮ ಅವಕಾಶಕ್ಕೆ ಉತ್ತೇಜನ ನೀಡಲಿದೆ ಹಾಗೂ ಎರಡು ನೆರೆಹೊರೆ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಇಂಬು ಕೊಡಲಿದೆ ಎಂದು ನಿರೀಕ್ಷಿಸಲಾಗಿದೆ.
3,200 ಕಿ.ಮೀ. ಉದ್ದದ ಮಾರ್ಗದ ಸಂಚಾರದ ರೂಪುರೇಷೆ ಅಂತಿಮಗೊಳಿಸಲು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅಧ್ಯಕ್ಷತೆಯಲ್ಲಿ ಶನಿವಾರ ಉನ್ನತ ಮಟ್ಟದ ಸಭೆ ನಡೆಯಿತು. ನೋಡಲ್ ಸಚಿವಾಲಯಗಳಾದ ನೌಕಾಯಾನ ಮತ್ತು ಗೃಹ ಸಚಿವಾಲಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ವಾರಾಣಸಿ ಪ್ರಧಾನಿ ಮೋದಿಯವರ ಲೋಕಸಭೆ ಕ್ಷೇತ್ರವಾಗಿದೆ.
ಬಿಎಸ್ಎಫ್ ರಕ್ಷಣೆ: 51 ದಿನ ಪಯಣಿಸಲಿರುವ ನೌಕೆಗೆ ರಕ್ಷಣೆ ಒದಗಿಸುವ ಹೊಣೆಯನ್ನು ಗಡಿ ಭದ್ರತಾ ಪಡೆಗೆ (ಬಿಎಸ್ಎಫ್) ವಹಿಸಲಾಗಿದೆ. ಬಿಎಸ್ಎಫ್ ಈಗಾಗಲೇ ಭಾರತ-ಬಾಂಗ್ಲಾದೇಶ ಗಡಿಯನ್ನು ಕಾಯುತ್ತಿದೆ. 3,200 ಕಿ.ಮೀ.ನಷ್ಟು ಉದ್ದದ ಒಳನಾಡು ಮಾರ್ಗದಲ್ಲಿ ನೌಕಾಯಾನಕ್ಕೆ ನಡೆಯಲಿರುವ ಮೊದಲ ಪ್ರಯತ್ನ ಇದಾಗಲಿದೆ.
ಮಾರ್ಗ ವಿವರ: ವಾರಾಣಸಿಯಿಂದ ಹೊರಡುವ ಐಷಾರಾಮಿ ನೌಕೆ ಬಂಗಾಳದ ಮೂಲಕ ಬಾಂಗ್ಲಾದೇಶ ಪ್ರವೇಶಿಸಿ ಅಂತಿಮವಾಗಿ ಅಸ್ಸಾಂನ ದಿಬ್ರೂಗಢದಲ್ಲಿ ಲಂಗರು ಹಾಕಲಿದೆ. ಮೊದಲು, ಉತ್ತರ ಪ್ರದೇಶದಲ್ಲಿರುವ ವಾರಾಣಸಿಯಿಂದ ಗಾಝಿಪುರಕ್ಕೆ ಪಯಣಿಸುವ ನೌಕೆ, ಅಲ್ಲಿಂದ ಬಕ್ಸಾರ್ ಮೂಲಕ ಬಿಹಾರ ಪ್ರವೇಶಿಸಿ ಪಟನಾ ತಲುಪಲಿದೆ. ನಂತರ ಫರಕ್ಕಾ ಮೂಲಕ ಪಶ್ಚಿಮ ಬಂಗಾಳಕ್ಕೆ ಸಾಗಲಿರುವ ಇದು, ಮುರ್ಷಿದಾಬಾದ್ ಮೂಲಕ ಕೋಲ್ಕತ ತಲುಪುತ್ತದೆ. ಆಮೇಲೆ, ಬಾಂಗ್ಲಾ ರಾಜಧಾನಿ ಢಾಕ್ಕಾಕ್ಕೆ ತೆರಳಿ ಅಲ್ಲಿಂದ ಗುವಾಹಟಿ ಮೂಲಕ ಭಾರತಕ್ಕೆ ಮರುಪಯಣ ಆರಂಭಿಸುತ್ತದೆ. ಶಿವಸಾಗರ ಮೂಲಕ ಪ್ರಯಾಣಿಸಿ ದಿಬ್ರೂಗಢದಲ್ಲಿ ಲಂಗರು ಹಾಕಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಪ್ರಾಯೋಗಿಕ ಯೋಜನೆ
ಇದು ನೋಡಲ್ ಯೋಜನೆಯೊಂದರ ಭಾಗವಾಗಿದ್ದು ಕಾರ್ಯಸಾಧು ಅಧ್ಯಯನ ವರದಿಯ ನಂತರ ಒಳನಾಡು ನೌಕಾಯಾನದ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಈ ನೌಕಾಯಾನ ಸೇವೆಗಾಗಿ ಭಾರತದ ಒಳನಾಡು ಜಲಮಾರ್ಗ ಪ್ರಾಧಿಕಾರವು ಅಂತರ ಲಕ್ಸುರಿ ರಿವರ್ ಕ್ರೂಯಿಸಸ್ ಮತ್ತು ಜೆಎಂ ಬಕ್ಷಿ ರಿವರ್ ಕ್ರೂಯಿಸಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.