ಎರಡು ದಿನಗಳ ಪ್ರವಾಸಕ್ಕಾಗಿ ಸೋಮವಾರ (ಏಪ್ರಿಲ್ 24) ಸಂಜೆ ಪ್ರಧಾನಿ ಮೋದಿ ದೇವರು ನಾಡು ಕೇರಳಕ್ಕೆ ಭೇಟಿ ನೀಡಿದರು. ಈ ವೇಳೆ ಕೊಚ್ಚಿಯಲ್ಲಿ ನಡೆದ ಯುವಂ 2023 ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದರು. ಉನ್ನಿ ಮುಕುಂದನ್, ನವ್ಯಾ ನಾಯರ್ ಮತ್ತು ಅಪರ್ಣಾ ಬಾಲಮುರಳಿ ಸೇರಿದಂತೆ ಮಲಯಾಳಂ ಚಿತ್ರರಂಗದ ಕಲಾವಿದರು ಸಹ ಮೋದಿ ಜೊತೆ ವೇದಿಕೆ ಹಂಚಿಕೊಂಡರು.
ಮೋದಿ ಜತೆ ಮಲಯಾಳಂ ನಟ-ನಟಿಯರು ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೆಲವರು ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದು, ನವ್ಯಾ ಅವರಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಇನ್ನು ಕೆಲವರು ಹಣಕ್ಕಾಗಿ ಅಪರ್ಣಾ ಬಾಲಮುರಳಿ ಮತ್ತು ನವ್ಯಾ ಅಂಥವರು ಕಾರ್ಯಕ್ರಮದಲ್ಲಿ ಭಾಗಹಿಸಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆದರೂ ಯಾವುದಕ್ಕೂ ಕ್ಯಾರೆ ಎನ್ನದ ನವ್ಯಾ ನಾಯರ್, ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಧಾನಿ ಮೋದಿ ಜತೆ ತೆಗೆಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದು ನನ್ನ ಸೌಭಾಗ್ಯ ಎಂದು ಫೋಟೋಗಳಿಗೆ ಅಡಿಬರಹ ನೀಡುವ ಮೂಲಕ ಟ್ರೋಲಿಗರಿಗೆ ನವ್ಯಾ ತಿರುಗೇಟು ನೀಡಿದ್ದಾರೆ.
ನವ್ಯಾ ನಾಯರ್ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳಬೇಕಿಲ್ಲ. ಮಲಯಾಳಂ ಮೂಲದ ನಟಿಯಾದರೂ ಕನ್ನಡದಲ್ಲೂ ಮನೆ ಮಾತಾಗಿದ್ದಾರೆ. ಅದಕ್ಕೆ ಕಾರಣ ಅವರು ಕನ್ನಡ ನೆಲದಲ್ಲಿ ಕೊಟ್ಟಂತಹ ಸೂಪರ್ ಹಿಟ್ ಸಿನಿಮಾಗಳು. ದರ್ಶನ್ ಅಭಿನಯದ ಗಜ ಹಾಗೂ ರವಿಚಂದ್ರನ್ ಜೊತೆ ದೃಶ್ಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ, ಬಾಸ್ ದೃಶ್ಯ-2, ನಮ್ಮ ಯಜಮಾನರು ಸೇರಿದಂತೆ ಕೆಲ ಸಿನಿಮಾಗಳಲ್ಲಿ ನವ್ಯಾ ನಟಿಸಿದ್ದಾರೆ.