ಕಾಸರಗೋಡು : ವೈಜ್ಞಾನಿಕ ಅರಿವು ಮೂಡಿಸುವ ನೆಪದಲ್ಲಿ ಸಿಪಿಎಂ ನಾಯಕರು ಹಿಂದೂ ಧರ್ಮ ಮತ್ತು ಹಿಂದೂ ದೇವರನ್ನು ಅವಹೇಳನ ನಡೆಸುವ ಯತ್ನವನ್ನು ಸಂಘಟಿತ ಹೋರಾಟದ ಮೂಲಕ ವಿಫಲಗೊಳಿಸಲಾಗುವುದು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ತಿಳಿಸಿದ್ದಾರೆ.
ಅವರು ತಿರುವನಂತಪುರದಲ್ಲಿ ನಾಮಜಪ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ಹಿಂದೂ ಬಾಂಧವರ ವಿರುದ್ಧ ಪ್ರಕರಣ ದಾಖಲಿಸಿದ ಕ್ರಮ ವಿರೋಧಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ನಗರದಲ್ಲಿ ನಡೆದ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಹಿಂದೂ ಧರ್ಮದ ನಂಬಿಕೆ ಸಂರಕ್ಷಣೆಗೆ ಬಿಜೆಪಿ ಬದ್ಧವಾಗಿದೆ. ವಿಜ್ಞಾನ ಮತ್ತು ನಂಬಿಕೆ ವಿಚಾರಕ್ಕೆ ಸಂಬಂಧಿಸಿ ಎ.ಎನ್. ಶಂಸೀರ್ ಮಹಾಗಣಪತಿಯ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆ ಅಪಕ್ವ ಹಾಗೂ ಹಾಸ್ಯಾಸ್ಪದ. ಒಂದು ವಿಭಾಗದ ಜನರ ನಂಬಿಕೆ, ಆಚಾರವನ್ನು ಅವಹೇಳನಕಾರಿಯಾಗಿ ವಿವರಿಸುವುದು ವೈಜ್ಞಾನಿಕ ಅರಿವು ಅಲ್ಲ. ಸ್ಪೀಕರ್ ಎಂಬ ಉನ್ನತ ಸ್ಥಾನದಲ್ಲಿರುವ ಶಂಸೀರ್ ಅವರಿಂದ ಇಂತಹ ಮಾತು ಬರಬಾರದಿತ್ತು. ಬೇರೆ ಯಾವುದೇ ಧರ್ಮದ ಬಗ್ಗೆ ಶಂಸೀರ್ ಅವರು ಈ ರೀತಿಯ ಅವಹೇಳನಕಾರಿ ಮಾತನ್ನಾಡಲು ಧೈರ್ಯ ತೋರಿಸುತ್ತಾರಾ ಎಂದು ಪ್ರಶ್ನಿಸಿದರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ಮುಖಂಡರು ಶಂಸೀರ್ ಬೆಂಬಲಕ್ಕೆ ನಿಂತಿರುವುದು ಸಿಪಿಎಂನ ಹಿಂದೂ ವಿರೋಧಿ ಧೋರಣೆಯನ್ನು ಬಹಿರಂಗಪಡಿಸಿದ್ದು, ಎ.ಎನ್. ಶಂಸೀರ್ ಕ್ಷಮೆ ಕೇಳುವವರೆಗೂ ಭಕ್ತರನ್ನು ಸಂಘಟಿಸಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ರಂಜಿತ್ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಂ. ಉಮಾ ಕಡಪ್ಪುರ, ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಧನಂಜಯನ್ ಮಧೂರು, ಕಾಸರಗೋಡು ಮಂಡಲ ಅಧ್ಯಕ್ಷೆ ಪ್ರಮೀಳಾ ಮಜಲ್, ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ್ ಪ್ರಭು, ಸುಕುಮಾರ್ ಕುದುರೆಪಾಡಿ, ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಯುವ ಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷ ಅಜಿತ್ ಕುಮಾರ್, ಜನಪ್ರತಿನಿಧಿಗಳು ಸೇರಿದಂತೆ ಹಿರಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯ್ ಕುಮಾರ್ ರೈ ಸ್ವಾಗತಿಸಿದರು. ಎ. ವೇಲಾಯುಧನ್ ವಂದಿಸಿದರು.


