ಕ್ವಾಲಾಲಂಪುರ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಬುಧವಾರ ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ ನಡೆಸಿದರು.
ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ಜೈಶಂಕರ್: ದ್ವಿಪಕ್ಷೀಯ ಸಂಬಂಧ ಚರ್ಚೆ
0
ಮಾರ್ಚ್ 28, 2024
Tags
0
samarasasudhi
ಮಾರ್ಚ್ 28, 2024
ಕ್ವಾಲಾಲಂಪುರ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಬುಧವಾರ ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ ನಡೆಸಿದರು.
ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಸಂಬಂಧಿಸಿದಂತೆ ಪ್ರಧಾನಿ ಅನ್ವರ್ ಅವರು ಉತ್ತಮ ದೃಷ್ಟಿಕೋನ ಹೊಂದಿದ್ದಾರೆ ಎಂದು ಶ್ಲಾಘಿಸಿದ ಜೈಶಂಕರ್, ಸಾಂಪ್ರದಾಯಿಕ ಮತ್ತು ಹೊಸ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಮಹತ್ವಾಕಾಂಕ್ಷೆಯ ಕಾರ್ಯಸೂಚಿ ರೂಪಿಸಲು ಇದು ನೆರವಾಗುತ್ತದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಜೈಶಂಕರ್ ಅವರು ಮಲೇಷ್ಯಾದ ವಿದೇಶಾಂಗ ಸಚಿವ ಮೊಹಮದ್ ಬಿನ್ ಹಾಜಿ ಹಸನ್ ಅವರನ್ನು ಭೇಟಿ ಮಾಡಿ, ಚರ್ಚಿಸಿದರು.
ಉಭಯ ದೇಶಗಳ ರಾಜಕೀಯ, ಆರ್ಥಿಕ, ರಕ್ಷಣೆ, ಡಿಜಿಟಲ್, ಸ್ಟಾರ್ಟ್ಅಪ್ ಕ್ಷೇತ್ರಗಳಲ್ಲಿ ಸಹಯೋಗ ವೃದ್ಧಿ ಸೇರಿದಂತೆ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಅಲ್ಲದೆ ಇಂಡೊ-ಪೆಸಿಫಿಕ್, ಪಶ್ಚಿಮ ಏಷ್ಯಾ ಮತ್ತು ಉಕ್ರೇನ್ ಕುರಿತ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಾಯಿತು ಎಂದು ಮಲೇಷ್ಯಾ ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಸಿಂಗಪುರ, ಫಿಲಿಪ್ಪೀನ್ಸ್, ಮಲೇಷ್ಯಾ ಪ್ರವಾಸದ ಮೂರನೇ ಹಾಗೂ ಕೊನೆಯ ದಿನದ ಪ್ರವಾಸದಲ್ಲಿ ಜೈಶಂಕರ್ ಅವರು ಕ್ವಾಲಾಲಂಪುರದಲ್ಲಿ ಇದ್ದಾರೆ.