ಪೆರ್ಲ: ದೇವಾಲಯಗಳಲ್ಲಿನ ಕ್ಷೇತ್ರ ಸಾನ್ನಿಧ್ಯ ವೃದ್ಧಿಯಾಗಬೇಕಾದಲ್ಲಿ ಅಲ್ಲಿನ ಭಕ್ತಾದಿಗಳ ಸಾಧನೆಯೂ ಗಣನೀಯವಾಗಿರುವುದಾಗಿ ಮಾಣಿಲ ಶ್ರೀಧಾಮದ ಶ್ರೀ ಮೊಹನದಾಸ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಅಂಗವಾಗಿ ಮಾಣಿಲ ಶ್ರೀ ಮಹಾಲಕ್ಷ್ಮೀ ಯಕ್ಷಗಾನ ಮಂಡಳಿಯ ವತಿಯಿಂದ ನಡೆದ ಯಕ್ಷಗಾನ ಬಯಲಾಟದ ವೇದಿಕೆಯಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಲಿರುವ ಬಿ.ರಾಜೇಂದ್ರ ಅವರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್ ಅಧ್ಯಕ್ಷತೆ ವಹಿಸಿದ್ದರು. ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾದೇವಸ್ಥಾನ ಸಮಿತಿ ಕಾರ್ಯದರ್ಶಿ, ನಿವೃತ್ತ ಮುಖ್ಯ ಶಿಕ್ಷಕ ಸದಾನಂದ ಶೆಟ್ಟಿ ಕುದ್ವ ಅಭಿನಂದನಾ ಭಾಷಣ ಮಾಡಿದರು. ದೇವಸ್ಥಾನ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್, ಉದ್ಯಮಿಗಳಾದ ಉದಯ ಚೆಟ್ಟಿಯಾರ್ ಬಜಕೂಡ್ಲು, ರಾಧಾಕೃಷ್ಣ ಆಳ್ವ ಪೂವನಡ್ಕ ಉಪಸ್ಥಿತರಿದ್ದರು.
ಡಾ. ಸತೀಶ ಪುಣಿಂಚಿತ್ತಾಯ ಸ್ವಾಗತಿಸಿದರು. ಪತ್ರಕರ್ತ, ಯಕ್ಷಗಾನ ಕಲಾವಿದ ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಉದಯಶಂಕರ ಭಟ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಶ್ರೀಧಾಮ ಮಾಣಿಲ ಯಕ್ಷಗಾನ ಮಂಡಳಿಯಿಂದ 'ಸುದರ್ಶನ ವಿಜಯ' ಯಕ್ಷಗಾನ ಬಯಲಾಟ ಜರುಗಿತು.