ಮುಂಬೈ: ಬಾರಾಮತಿ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಹಾಗೂ ಮಹಾರಾಷ್ಟ್ರ ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರಿಗೆ ಮುಂಬೈ ಪೊಲೀಸರು ಬಿಗ್ ರಿಲೀಫ್ ಕೊಟ್ಟಿದ್ದಾರೆ. 25 ಸಾವಿರ ಕೋಟಿ ರೂ. ಮೊತ್ತದ ಸಹಕಾರ ಬ್ಯಾಂಕ್ ಹಗರಣದಲ್ಲಿ ಸುನೇತ್ರಾ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ಕಳೆದ ಜನವರಿಯಲ್ಲೇ ಮುಕ್ತಾಯ ವರದಿ ಸಲ್ಲಿಕೆ ಮಾಡಲಾಗಿತ್ತು. ಆದರೆ ಈ ವಿವರ ಈಗಷ್ಟೇ ಬಹಿರಂಗವಾಗಿದೆ. ಮುಂಬೈ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ದಳ ಮುಕ್ತಾಯ ವರದಿಯನ್ನು ಸಲ್ಲಿಕೆ ಮಾಡಿದೆ. ಪವಾರ್ ಅವರು ಶರದ್ ಪವಾರ್ ಅವರ ಭದ್ರಕೋಟೆಯಾದ ಬಾರಾಮತಿ ಕ್ಷೇತ್ರದಿಂದ ಅವರ ಮಗಳು ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಲಿದ್ದಾರೆ.
ಆರ್ಥಿಕ ಅಪರಾಧ ವಿಭಾಗ ಸಲ್ಲಿಸಿರುವ ವರದಿಯಲ್ಲಿ, ಜರಂದೇಶ್ವರ ಶುಗರ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್ನ ಆಸ್ತಿಯನ್ನು ಜರಂದೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸರಕುಗಳಿಂದ ಬಾಡಿಗೆಗೆ ತೆಗೆದಯಕೊಳ್ಳುವಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆದಿಲ್ಲ ಎಂದು ಹೇಳಲಾಗಿದೆ. ಅಜಿತ್ ಪವಾರ್ ಸೋದರಳಿಯನಿಗೂ ಇಒಡಬ್ಲ್ಯು ಕ್ಲೀನ್ ಚೀಟ್ ನೀಡಿದೆ.
ಸುನೇತ್ರಾ ಪವಾರ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದೇ ತಡ, ರಾಜಕೀಯ ಕೆಸರೆರೆಚಾಟವೂ ಶುರುವಾಗಿವೆ. ಯಾವುದೇ ಹಗರಣ ಆರೋಪ ಹೊತ್ತಿರುವ ನಾಯಕರು ಬಿಜೆಪಿ ಸೇರಿದರೆ ಅಥವಾ ಬೆಂಬಲ ನೀಡಿದರೆ ಅವರ ವಿರುದ್ಧ ಇರುವ ಆರೋಪಗಳೆಲ್ಲಾ ದೂರವಾಗಿ ಕ್ಲೀನ್ ಚಿಟ್ ಸಿಗುತ್ತದೆ, ಇಲ್ಲವೇ ತನಿಖೆ ನಿಧಾನವಾಗುತ್ತದೆ. ಈ ಮೂಲಕ ಬಿಜೆಪಿ ವಾಷಿಂಗ್ ಮಷಿನ್ ಆಗಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ.