ನವದೆಹಲಿ: ತನ್ನ ವಶದಲ್ಲಿರುವ ಸರಕು ಸಾಗಣೆ ಹಡಗಿನ 17 ಭಾರತೀಯ ಸಿಬ್ಬಂದಿಯನ್ನು ಭೇಟಿ ಮಾಡಲು ಭಾರತ ಸರ್ಕಾರದ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್ ಅಬ್ದುಲ್ಲಾಹಿಯಾನ್ ಹೇಳಿದ್ದಾರೆ.
0
samarasasudhi
ಏಪ್ರಿಲ್ 15, 2024
ನವದೆಹಲಿ: ತನ್ನ ವಶದಲ್ಲಿರುವ ಸರಕು ಸಾಗಣೆ ಹಡಗಿನ 17 ಭಾರತೀಯ ಸಿಬ್ಬಂದಿಯನ್ನು ಭೇಟಿ ಮಾಡಲು ಭಾರತ ಸರ್ಕಾರದ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್ ಅಬ್ದುಲ್ಲಾಹಿಯಾನ್ ಹೇಳಿದ್ದಾರೆ.
ಭಾನುವಾರ ನಡೆದ ದೂರವಾಣಿ ಸಂಭಾಷಣೆಯ ವೇಳೆ ಅಮೀರ್ ಅಬ್ದುಲ್ಲಾಹಿಯಾನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಈ ವಿಷಯ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸಂಭಾಷಣೆ ವೇಳೆ ಪೋರ್ಚುಗೀಸ್ ಧ್ವಜ ಹೊಂದಿರುವ 'ಎಂಎನ್ಸಿ ಏರೀಸ್' ಹಡಗಿನಲ್ಲಿರುವ 17 ಭಾರತೀಯ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಜೈಶಂಕರ್ ಅವರು ಕಳವಳ ವ್ಯಕ್ತಪಡಿಸಿದ್ದರು. ಸಿಬ್ಬಂದಿಯನ್ನು ಬಿಡುಗಡೆಗೊಳಿಸುವಂತೆ ಇರಾನ್ಗೆ ಮನವಿ ಮಾಡಿದ್ದರು ಎಂದು ವರದಿ ತಿಳಿಸಿದೆ.
'ನಮ್ಮ(ಇರಾನ್) ವಶದಲ್ಲಿರುವ ಹಡಗಿನ ವಿವರಗಳನ್ನು ಕಲೆ ಹಾಕುತ್ತಿದ್ದೇವೆ. ಶೀಘ್ರದಲ್ಲೇ ಭಾರತ ಸರ್ಕಾರದ ಪ್ರತಿನಿಧಿಗಳು ಅವರು ಹೇಳಿದ ಹಡಗಿನ ಸಿಬ್ಬಂದಿಯನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ' ಎಂದು ಅಮೀರ್ ತಿಳಿಸಿದ್ದಾರೆ.
ಏಪ್ರಿಲ್ 13ರಂದು ಇರಾನ್ನ 'ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್'ನ ಕಮಾಂಡರೊಗಳು ಹೋರ್ಮುಜ್ ಜಲಸಂಧಿಯಲ್ಲಿ 'ಎಂಎನ್ಸಿ ಏರೀಸ್' ಹಡಗಿನ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಹಡಗಿನಲ್ಲಿರುವ 25 ಸಿಬ್ಬಂದಿಯ ಯೋಗಕ್ಷೇಮ ಮತ್ತು ಹಡಗನ್ನು ಮರಳಿ ಪಡೆಯುವ ಕುರಿತಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಎಂಎನ್ಸಿ(ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ) ಶನಿವಾರ ತಿಳಿಸಿತ್ತು.