ಸಂಭಲ್: ದೀರ್ಘ ಕಾಲದಿಂದ ಮುಚ್ಚಿದ ಸ್ಥಿತಿಯಲ್ಲಿದ್ದ ಪುರಾತನ ಬಾವಿಯೊಂದು ಇಲ್ಲಿನ ಶಹಜಾದಿ ಸರಾಯ್ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ನಗರದ ವ್ಯಾಪ್ತಿಯಲ್ಲಿ ಬರುವ ಕ್ಷೇಮನಾಥ ತೀರ್ಥದ ಆವರಣದಲ್ಲಿ ಬಾವಿ ಪತ್ತೆಯಾಗಿರುವ ಮಾಹಿತಿ ಲಭಿಸಿದ್ದು, ಅಲ್ಲಿನ ಜನರು ಅದನ್ನು ಪುನರುಜ್ಜೀವನಗೊಳಿಸುವ ಕೆಲಸ ಕೈಗೊಂಡಿದ್ದಾರೆ' ಎಂದು ಸಂಭಲ್ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ವಂದನಾ ಮಿಶ್ರಾ ಸೋಮವಾರ ಹೇಳಿದ್ದಾರೆ.
'ಮುಚ್ಚಿದ ಸ್ಥಿತಿಯಲ್ಲಿದ್ದ ಬಾವಿಯನ್ನು ತೆರೆಯಲಾಗಿದ್ದು, ಸುಮಾರು ಎಂಟು ಅಡಿ ಆಳದಲ್ಲಿ ನೀರು ಇದೆ. ಪುರಾತನ ಬಾವಿಯಲ್ಲಿ ಶುದ್ಧ ನೀರು ಇರುವುದು ಪವಾಡವೇ ಸರಿ' ಎಂದು ಕ್ಷೇಮನಾಥ ತೀರ್ಥದ ಪ್ರಧಾನ ಅರ್ಚಕ ಮಹಾಂತ ಬಾಲಯೋಗಿ ದೀನಾನಾಥ ತಿಳಿಸಿದ್ದಾರೆ.
'ಪುರಾತನ ಬಾವಿಯು ಈ ಐತಿಹಾಸಿಕ ಯಾತ್ರಾಸ್ಥಳದಲ್ಲಿ ನೀರಿನ ಪ್ರಮುಖ ಮೂಲ ಆಗಿತ್ತು. ಈ ಹಿಂದೆ ಕ್ಷೇಮನಾಥ ತೀರ್ಥಕ್ಕೆ ಬರುವ ಭಕ್ತರು ಇದೇ ಬಾವಿಯ ನೀರನ್ನು ಬಳಸುತ್ತಿದ್ದರು' ಎಂದಿದ್ದಾರೆ.


