HEALTH TIPS

ರೀಲ್ಸ್‌, ರಿಯಾಲಿಟಿ ಷೋಗಳಿಂದ ಮಕ್ಕಳನ್ನು ಪಾರು ಮಾಡಿ: ಬಾಗೂರು ಮಾರ್ಕಂಡೇಯ

ಮಂಡ್ಯ: 'ಮಕ್ಕಳು ತಮ್ಮ ಭಾವನೆಯನ್ನು ಅಭಿವ್ಯಕ್ತಿಸಲು ಗೋಡೆ ಮೇಲೆ ಗೀಚುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳದ ಪೋಷಕರು ಮಕ್ಕಳನ್ನು ಗದರುತ್ತಾರೆ. ಗೋಡೆ ಬಣ್ಣಕ್ಕೆ ನೀಡುವ ಬೆಲೆಯನ್ನು ಮಗುವಿನ ಚಿತ್ರಕ್ಕೆ ಕೊಡುತ್ತಿಲ್ಲ' ಎಂದು ಮಕ್ಕಳ ಸಾಹಿತಿ ಬಾಗೂರು ಮಾರ್ಕಂಡೇಯ ವಿಷಾದಿಸಿದರು.

87ನೇ ನುಡಿಜಾತ್ರೆಯ ಸಂಚಿಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞಿ ತ್ರಿವೇಣಿ ವೇದಿಕೆಯಲ್ಲಿ ಶನಿವಾರ ನಡೆದ 'ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಸಾಹಿತ್ಯದ ಪಾತ್ರ' ಗೋಷ್ಠಿಯಲ್ಲಿ ಅವರು ಮಾತನಾಡಿದರು.  

ರೀಲ್ಸ್‌, ರಿಯಾಲಿಟಿ ಷೋಗಳಲ್ಲಿ ಮಗ್ನರಾಗಿರುವ ಮಕ್ಕಳನ್ನು ಕಲೆ, ಪಠ್ಯೇತರ ಓದಿನತ್ತ ಸೆಳೆಯಬೇಕು. ಗೃಹಪಾಠದ ಹೊರೆ, ಅಂಕಗಳ ಕಾರುಬಾರಿನಲ್ಲಿ ಮಕ್ಕಳ ಸೃಜನಶೀಲತೆ ಬಾಡದಂತೆ ನೋಡಿಕೊಳ್ಳಿ. ಪ್ರತಿ ಮಗು ಭೂಮಿ ಮೇಲಿನ ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದರು. 

ಸಾಹಿತಿ ಬಸು ಬೇವಿನಗಿಡದ ಮಾತನಾಡಿ, 'ರವೀಂದ್ರನಾಥ ಠಾಗೂರ್‌, ದಿನಕರ ದೇಸಾಯಿ, ಕುವೆಂಪು, ಶಿವರಾಮ ಕಾರಂತರು, ನಾ.ಡಿಸೋಜಾ, ಎಚ್‌.ಎಸ್‌.ವೆಂಕಟೇಶಮೂರ್ತಿ ಮುಂತಾದವರು ಮಕ್ಕಳ ಸಾಹಿತ್ಯಕ್ಕೆ ಅನನ್ಯ ಕಾಣಿಕೆ ನೀಡಿದ್ದಾರೆ. ಮಕ್ಕಳ ಸಾಹಿತ್ಯ ರಚನೆ ಸರಳವಲ್ಲ, ಅವರ ಭಾವಕೋಶಕ್ಕೆ ಲಗ್ಗೆ ಇಡುವ ರೀತಿ ಬರೆಯಬೇಕು' ಎಂದರು. 

ಸಾಹಿತಿ ಆರ್‌.ಡಿ.ರವೀಂದ್ರ ಮಾತನಾಡಿ, 'ಮಕ್ಕಳು ಭತ್ತ ಬೆಳೆಯುವ ಗದ್ದೆಯಾಗಬೇಕೇ ಹೊರತು, ಭತ್ತ ತುಂಬುವ ಚೀಲವಾಗಬಾರದು. ಕರ್ಣನ ಬದ್ಧತೆ, ಏಕಲವ್ಯನ ಏಕಾಗ್ರತೆ, ಸತ್ಯಹರಿಶ್ಚಂದ್ರನ ಸತ್ಯನಿಷ್ಠೆ, ಪ್ರಹ್ಲಾದದ ನಂಬಿಕೆ ಈ ಗುಣಗಳು ಮಕ್ಕಳಲ್ಲಿ ಮೈಗೂಡಬೇಕೆಂದರೆ, ಪೌರಾಣಿಕ ಕಾವ್ಯ ಮತ್ತು ನೀತಿ ಪ್ರಧಾನ ಕತೆಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದರು. 

ಮಕ್ಕಳ ಸಾಹಿತಿ ಡಿ.ಎನ್‌.ಅಕ್ಕಿ ಆಶಯ ನುಡಿಗಳನ್ನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries