ಚೆನ್ನೈ: ಅಂತರರಾಷ್ಟ್ರೀಯ ಸಮುದ್ರ ಗಡಿ ದಾಟಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದ ತಮಿಳುನಾಡಿನ ರಾಮೇಶ್ವರದ ಮೀನುಗಾರರನ್ನು ಶ್ರೀಲಂಕಾ ಜೈಲಿನಿಂದ ಬಿಡುಗಡೆಗೊಳಿಸಿದೆ. ಮೀನುಗಾರರು ಚೆನ್ನೈಗೆ ಆಗಮಿಸಿದ್ದಾರೆ ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರು ಮಂದಿ ಮೀನುಗಾರರು ಕೊಲಂಬೊದಿಂದ ವಿಮಾನ ಹತ್ತಿ ಬುಧವಾರ ರಾತ್ರಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅವರನ್ನು ರಾಜ್ಯದ ಅಧಿಕಾರಿಗಳು ಬರಮಾಡಿಕೊಂಡರು. ಇಲ್ಲಿಂದ ಅವರ ತವರು ಜಿಲ್ಲೆಗಳಿಗೆ ತಲುಪಲು ಎಲ್ಲಾ ವ್ಯವಸ್ಥೆ ಮಾಡಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯಸ್ಥಿಕೆ ಮೀನುಗಾರರ ಬಿಡುಗಡೆಗೆ ಸಹಾಯಕವಾಗಿದೆ ಎಂದು ಅವರು ಹೇಳಿದ್ದಾರೆ.
ಜನವರಿ 12ರಂದು ಮೀನುಗಾರಿಕೆಗೆ ತೆರಳಿದ್ದ ಮೀನುಗಾರರನ್ನು ಸಮುದ್ರ ಗಡಿ ದಾಟಿದ ಆರೋಪದ ಮೇಲೆ ಶ್ರೀಲಂಕಾದ ಕೋಸ್ಟ್ ಗಾರ್ಡ್ ಬಂಧಿಸಿ ಅವರ ಹಡಗುಗಳನ್ನು ವಶಪಡಿಸಿಕೊಂಡಿತ್ತು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಈ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದು ಬಂಧಿತರ ಬಿಡುಗಡೆಗೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದರು.




