ಮಂಜೇಶ್ವರ: ತೂಮಿನಾಡು, ಕುಂಜತ್ತೂರು, ಉದ್ಯಾವರ, ಮಂಜೇಶ್ವರ, ಉಪ್ಪಳ ಮೊದಲಾದೆಡೆ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ಸೋಮವಾರ ನೆರವೇರಿತು. ಅರ್ಹರಿಗೆ ಫಿತರ್ ಝಕಾತ್ ನೀಡಿದ ಬಳಿಕ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಕುಂಜತ್ತೂರು ಮಸ್ಜಿದುನ್ನೂರು ಮಸೀದಿಯಲ್ಲಿ ಉಸ್ತಾದ್ ಸಮೀರ್ ಅನ್ಸಾರಿ, ದಾರುಸ್ಸಲಾಂ ಸಲಫಿ ಮಸೀದಿ ಈದ್ಗಾದಲ್ಲಿ ಮೊಹಮ್ಮದಲಿ ಸಲಫಿ ನಮಾಜ್ ಗೆ ನೇತೃತ್ವ ನೀಡಿದರು. ಉದ್ಯಾವರ ಸಾವಿರ ಜಮಾಹತ್, ಈದ್ಗಾ ಕಡಂಬಾರ್, ಪೆÇಸೋಟು ಜುಮಾ ಮಸೀದಿ, ತೂಮಿನಾಡು ಅಲ್ ಫತಾಃ ಜುಮಾ ಮಸೀದಿ ಸೇರಿದಂತೆ ಮಂಜೇಶ್ವರ ತಾಲೂಕಿನಾದ್ಯಂತ ಈದ್ ನಮಾಝ್ ಹಾಗೂ ಖುತ್ಬಾ ನಡೆಯಿತು.
ಈ ಸಂದರ್ಭದಲ್ಲಿ ಧರ್ಮಗುರುಗಳು ತಮ್ಮ ಈದ್ ಸಂದೇಶದಲ್ಲಿ ಫೆಲಸ್ತೀನ್ ಜನತೆಗಾಗಿ ಪ್ರತ್ಯೇಕ ಪ್ರಾರ್ಥನೆ ನಿರ್ವಹಿಸುವಂತೆ ವಿನಂತಿಸಿಕೊಂಡರು. ಅಲ್ಲದೆ ಎಲ್ಲರೂ ಪರಸ್ಪರ ಸಹೋದರಂತೆ ಬದುಕಿ ಶಾಂತಿಯ ವಾತಾವರಣ ನಿರ್ಮಿಸುವಂತೆ ಸೌಹಾರ್ದ ಸಂದೇಶ ನೀಡಿದರು.





