ನವದೆಹಲಿ: ಹಿಂದೂಗಳ ಧರ್ಮ ಗ್ರಂಥ ಭಗವದ್ಗೀತೆ ಮತ್ತು ಭರತಮುನಿಯ ನಾಟ್ಯಶಾಸ್ತ್ರಕ್ಕೆ ಯುನೆಸ್ಕೊ ಮನ್ನಣೆ ದೊರಕಿದೆ.
ಯುನೆಸ್ಕೊ ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್(ಯುನೆಸ್ಕೊ ವಿಶ್ವ ಸ್ಮೃತಿ ದಾಖಲೆ)ನಲ್ಲಿ ಭಗವದ್ಗೀತೆ ಮತ್ತು ನಾಟ್ಯಶಾಸ್ತ್ರ ಸೇರಿ ಇನ್ನೂ 74 ಹೊಸ ಸಂಗ್ರಹ ಸಾಕ್ಷ್ಯಗಳನ್ನು ದಾಖಲು ಮಾಡಲಾಗಿದೆ.
ವಿಜ್ಞಾನದ ಕ್ರಾಂತಿಗಳು, ಇತಿಹಾಸಕ್ಕೆ ಮಹಿಳೆಯರ ಕೊಡುಗೆ, 72 ದೇಶಗಳು ಮತ್ತು ನಾಲ್ಕು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಮುಖ ಮೈಲಿಗಲ್ಲುಗಳು ರಿಜಿಸ್ಟರ್ನಲ್ಲಿ ದಾಖಲಾಗಿದೆ.
ಪುಸ್ತಕ, ಹಸ್ತಪ್ರತಿ, ನಕ್ಷೆ, ಛಾಯಾಚಿತ್ರಗಳು, ಧ್ವನಿಮುದ್ರಣ, ವಿಡಿಯೊಗಳ ಮಾದರಿಗಳಲ್ಲಿ ದಾಖಲು ಮಾಡಲಾಗಿದೆ ಎಂದು ಯುನೆಸ್ಕೊ ಹೇಳಿದೆ.
ಏ.18ರಂದು ವಿಶ್ವ ಪಾರಂಪರಿಕ ದಿನದ ಅಂಗವಾಗಿ ಈ ಘೋಷಣೆ ಮಾಡಲಾಗಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂತಸ ಹಂಚಿಕೊಂಡು, 'ಜಗತ್ತಿನಾದ್ಯಂತ ಇರುವ ಎಲ್ಲಾ ಭಾರತಿಯರಿಗೂ ಇದು ಹೆಮ್ಮೆಯ ಕ್ಷಣವಾಗಿದೆ. ಭಗವದ್ಗೀತೆ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆಯನ್ನು ಪೋಷಿಸಿವೆ. ಮುಂದಿನ ದಿನಗಳಲ್ಲಿ ಜಗತ್ತಿಗೆ ಇನ್ನಷ್ಟು ಸ್ಪೂರ್ತಿ ನೀಡಲಿವೆ' ಎಂದು ಬರೆದುಕೊಂಡಿದ್ದಾರೆ.





