ಪೆರ್ಲ: ಪಡ್ರೆ ಗ್ರಾಮದ ಸ್ವರ್ಗ ಮಲೆತ್ತಡ್ಕ ಶ್ರೀ ಜಟಾಧಾರಿ ಮೂಲಸ್ಥಾನದ ಆಗ್ನೇಯ ಭಾಗದಲ್ಲಿ ಉತ್ತರಾಭಿಮುಖವಾಗಿ ಮಠ ಸಂಪ್ರದಾಯದಂತೆ ನಿರ್ಮಾಣವಾಗಲಿರುವ ಪಡ್ರೆ ಶ್ರೀ ದುರ್ಗಾಪರಮೇಶ್ವರೀ ದೇವಿ ಗುಡಿಯ ಶಿಲಾನ್ಯಾಸ ಬುಧವಾರ ಬೆಳಗ್ಗೆ ನಡೆಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನಗೈದು, ಶೀಘ್ರ ಗುಡಿ ನಿರ್ಮಾಣ ಪೂರ್ತಿಗೊಳ್ಳಲಿ. ತನ್ಮೂಲಕ ಸುಭಿಕ್ಷ ನೆಲೆಗೊಳ್ಳಲಿ ಎಂದು ಹಾರೈಸಿದರು.
ಕ್ಷೇತ್ರದ ತಂತ್ರಿವರ್ಯ ಕೊರೆಕ್ಕಾನ ನಾರಾಯಣ ಭಟ್, ಮಲ್ಲ ಶ್ರೀಕ್ಷೇತ್ರದ ಅಡಳಿತ ಮೊಕ್ತೇಸರ ಶ್ರೀಧರ ಭಟ್, ರಣಮಂಗಲ ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಮತ್ತಿತರರು ಉಪಸ್ಥಿತರಿದ್ದರು. ಬೆಳಗ್ಗೆ ಶ್ರೀದೈವಕ್ಕೆ ಸೀಯಾಳ ಸಮರ್ಪಿಸಲಾಯಿತು. ಎಡನೀರು ಸ್ವಾಮೀಜಿಗಳನ್ನು ಪೂರ್ಣಕುಂಭ ಸ್ವಾಗತ ನೀಡಿ ಶ್ರೀ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.
ಬಳಿಕ ನಡೆದ ಸಭೆಯಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಶ್ರದ್ಧೆ ಹಾಗೂ ಭಕ್ತಿ ಇವೆರಡೂ ದೇವರ ಸೇವೆಯಾಗಿದೆ. ಶ್ರದ್ದೆಯಂತೆಯೇ ಭಕ್ತಿಯಲ್ಲಿ ತೊಡಗಿಸಿಕೊಳ್ಳುವ ಮನಸ್ಥಿತಿಯೂ ಆಂತರಿಕ ಶಕ್ತಿಗಳಲ್ಲಿ ಒಂದಾಗಿದೆ. ಭಗವಂತನಿಗೆ ಸಂಬಂಧಿಸಿದ ಚಟುವಟಿಕೆ ಶ್ರದ್ಧಾಭಕ್ತಿಯಿಂದ ನಿರ್ವಹಿಸಿದಾಗ ಶಕ್ತಿ, ಆನಂದ ಎರಡೂ ಅನುಭವಕ್ಕೆ ಬರುತ್ತದೆ ಎಂದರು.
ದೈವಜ್ಞ ಸತ್ಯಮೂರ್ತಿ ಬಡಕಿಲ್ಲಾಯ ಸವಣೂರು ಮಾತನಾಡಿದರು. ಕಾಟುಕುಕ್ಕೆ ದೇವಳದ ಆಡಳಿತ ಮೊಕ್ತೇಸರ ತಾರಾನಾಥ ರೈ ಪಡ್ಡಂಬೈಲುಗುತ್ತು, ಇಡಿಯಡ್ಕ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ ಕುದ್ವ, ಪಡುಮಲೆ ಕೂವೆ ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ಉದ್ಯಮಿಗಳಾದ ಎಸ್.ಎನ್.ಮಯ್ಯ, ಗೋಪಾಲಕೃಷ್ಣ ಪೈ ಬದಿಯಡ್ಕ, ಅಶೋಕ್ ಪೈ ಅಮೆಕ್ಕಳ, ಶಾಂತ ಕೂವೆತ್ತೋಟ, ನಾರಾಯಣ ಕುಂಜತ್ತಾಯ ಬೆಂಗಳೂರು, ಸಹಕಾರಿ ಧುರೀಣ ಶಂಕರನಾರಾಯಣ ಭಟ್ ಕಾಯರುಗದ್ದೆ ಉಪಸ್ಥಿತರಿದ್ದರು. ಕೆ.ವೈ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಂದಿಸಿದರು. ನವ್ಯಶ್ರೀ ಸ್ವರ್ಗ, ಕೀರ್ತಿ ಕುಕ್ಕುತ್ತಡಿ ನಿರೂಪಿಸಿದರು.




.jpg)
.jpg)
