HEALTH TIPS

ಪಾಕ್‌ ರಿಮೋಟ್‌ ಕಂಟ್ರೋಲ್‌ನಿಂದ 'ಕೈ' ಕೆಲಸ: ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ದುರದೃಷ್ಟವಶಾತ್‌ ಪಾಕಿಸ್ತಾನದ ವಿಷಯಗಳ ಪ್ರಚಾರ ವಕ್ತಾರರಾಗಿ ಬದಲಾಗಿವೆ. ಒಂದು ಕುಟುಂಬವನ್ನು ಓಲೈಸಲು ಹಾಗೂ ಒತ್ತಡಕ್ಕೆ ಮಣಿದು ಕಾಂಗ್ರೆಸ್‌ ನಾಯಕರು ಪಾಕಿಸ್ತಾನಕ್ಕೆ ಕ್ಲೀನ್‌ಚಿಟ್‌ ನೀಡುವ ಕೆಲಸ ಮಾಡುತ್ತಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಾಪ್ರಹಾರ ನಡೆಸಿದರು.

ಲೋಕಸಭೆಯಲ್ಲಿ 'ಆಪರೇಷನ್‌ ಸಿಂಧೂರ' ಕುರಿತ ಚರ್ಚೆಗೆ ಸುಮಾರು ಒಂದು ಗಂಟೆ ಪ್ರತಿಕ್ರಿಯಿಸಿದ ಅವರು, 'ಕಾಂಗ್ರೆಸ್ ನಾಯಕರು ಆ ಕುಟುಂಬದ ಒತ್ತಡಕ್ಕೆ ಒಳಗಾಗಬಾರದು ಮತ್ತು ರಾಷ್ಟ್ರೀಯ ಹೆಮ್ಮೆಯ ಕ್ಷಣವನ್ನು ಅಪಹಾಸ್ಯದ ವಿಷಯವನ್ನಾಗಿ ಪರಿವರ್ತಿಸಬಾರದು' ಎಂದು ಕಿವಿಮಾತು ಹೇಳಿದರು. ತಮ್ಮ ಭಾಷಣದ ಬಹುತೇಕ ಸಮಯವನ್ನು ನೆಹರೂ ನೀತಿ ಹಾಗೂ ಕಾಂಗ್ರೆಸ್ ವಿರುದ್ಧ ಟೀಕೆಗೆ ಮೀಸಲಿಟ್ಟರು.

'ಕಾಂಗ್ರೆಸ್ ಈಗ ಪಾಕಿಸ್ತಾನದ ರಿಮೋಟ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ಯುವ ನಾಯಕರು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು 'ತಮಾಷಾ' ಎಂದು ಕರೆಯುವಂತೆ ಮಾಡುತ್ತಿದೆ. ಕಾಂಗ್ರೆಸ್‌ ಪಕ್ಷವು ಹತಾಶೆಯ ಪರಮಾವಧಿಗೆ ತಲುಪಿದೆ. ಪಹಲ್ಗಾಮ್‌ ಉಗ್ರರನ್ನು ಹತ್ಯೆಗೈದ ಆಪರೇಷನ್‌ ಮಹಾದೇವ ಕಾರ್ಯಾಚರಣೆಯ ಸಮಯವನ್ನೂ ಪ್ರಶ್ನಿಸಿದೆ. ಪಾಕಿಸ್ತಾನಕ್ಕೆ ಕ್ಲೀನ್‌ಚಿಟ್‌ ನೀಡಿರುವುದನ್ನು ನೋಡಿ ಇಡೀ ದೇಶವೇ ಆಶ್ಚರ್ಯಚಕಿತವಾಗಿದೆ' ಎಂದರು.

'ಪಾಕಿಸ್ತಾನದಲ್ಲಿ ಭಯೋತ್ಪಾದಕರು ಮತ್ತು ಅವರ ಯಜಮಾನರು ಕಣ್ಣೀರು ಸುರಿಸುತ್ತಿದ್ದಾರೆ ಮತ್ತು ಅವರು ಹಾಗೆ ಮಾಡುವುದನ್ನು ನೋಡುತ್ತಾ ಇಲ್ಲಿಯೂ ಕೆಲವರು ಅಳುತ್ತಿದ್ದಾರೆ' ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

*ಭಾರತಕ್ಕೆ ಇಡೀ ವಿಶ್ವದಿಂದ ಬೆಂಬಲ ಸಿಕ್ಕಿತು. ಆದರೆ, ಕಾಂಗ್ರೆಸ್ ನಮ್ಮ ಸೈನಿಕರ ಶೌರ್ಯವನ್ನು ಬೆಂಬಲಿಸದಿರುವುದು ದುರದೃಷ್ಟಕರ. ಕಾಂಗ್ರೆಸ್ ನಾಯಕರು ರಾಜಕೀಯ ಲಾಭಕ್ಕಾಗಿ ನನ್ನನ್ನು ಗುರಿಯಾಗಿಸಿಕೊಂಡರು. ಅವರ ಕ್ಷುಲ್ಲಕ ಹೇಳಿಕೆಗಳು ನಮ್ಮ ಧೈರ್ಯಶಾಲಿ ಸೈನಿಕರನ್ನು ನಿರುತ್ಸಾಹಗೊಳಿಸಿದವು

*ದೇಶವನ್ನು ದಶಕಗಳ ಕಾಲ ಆಳಿದವರು ನಮ್ಮ ರಕ್ಷಣಾ, ವಿದೇಶಾಂಗ ಮತ್ತು ಗೃಹ ಸಚಿವರನ್ನು ನಂಬದಿರುವುದು ದುರದೃಷ್ಟಕರ

*ಸಶಸ್ತ್ರ ಪಡೆಗಳ ಬಗ್ಗೆ ನಕಾರಾತ್ಮಕ ಧೋರಣೆ ಹೊಂದುವುದು ಕಾಂಗ್ರೆಸ್‌ನ ಹಳೆಯ ಚಾಳಿಯಾಗಿದೆ. ಕಾರ್ಗಿಲ್ ವಿಜಯವನ್ನು ಕಾಂಗ್ರೆಸ್ ಇನ್ನೂ ಒಪ್ಪಿಕೊಂಡಿಲ್ಲ

*ಭಾರತೀಯ ಸಶಸ್ತ್ರ ಪಡೆಗಳು ಸರ್ಜಿಕಲ್ ಸ್ಟ್ರೈಕ್ ನಡೆಸಿದವು. ಕಾಂಗ್ರೆಸ್ ಪಕ್ಷವು ಸಶಸ್ತ್ರ ಪಡೆಗಳಿಂದ ಪುರಾವೆ ಕೇಳಿತು. ಈ ಕಾರ್ಯಾಚರಣೆಗೆ ಜನರಿಂದ ಅಪಾರ ಬೆಂಬಲ ಸಿಕ್ಕಿರುವುದು ಗೊತ್ತಾದಾಗ ನಾವು ಸಹ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೆವು ಎಂದು ರಾಗ ಬದಲಾಯಿಸಿತು

*ಆದಂಪುರ ವಾಯುನೆಲೆ ನಾಶವಾಗಿದೆ ಎಂದು ಪಾಕಿಸ್ತಾನ ಸುಳ್ಳುಗಳನ್ನು ಹರಡಲು ಪ್ರಯತ್ನಿಸಿತು. ನಾನು ಮರುದಿನ ಅಲ್ಲಿಗೆ ಹೋಗಿ ಪಾಕಿಸ್ತಾನದ ಸುಳ್ಳುಗಳನ್ನು ಬಹಿರಂಗಪಡಿಸಿದೆ

*ಪಾಕ್‌ ಸೇನೆಯು ಭಾರತದ ಕಡೆಗೆ 1,000 ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿತು. ಆದರೆ, ನಮ್ಮ ಸಶಸ್ತ್ರ ಪಡೆಗಳು ಅವುಗಳನ್ನು ಆಕಾಶದಲ್ಲಿಯೇ ನಾಶಪಡಿಸಿದವು

*ಕಾಂಗ್ರೆಸ್ ಓಲೈಕೆ ಮತ್ತು ಮತಬ್ಯಾಂಕ್ ರಾಜಕೀಯಕ್ಕಾಗಿ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದೆ

*ಸಿಂಧೂ ನದಿ ನೀರು ಒಪ್ಪಂದದ ಬಗ್ಗೆ ನೆಹರೂ ಮಾಡಿದ ತಪ್ಪನ್ನು ನಂತರ ಯಾವುದೇ ಸರ್ಕಾರಗಳು ಸರಿಪಡಿಸಲಿಲ್ಲ. ರಕ್ತ ಹಾಗೂ ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನಾವು ರವಾನಿಸಿದ್ದೇವೆ

*ನೆಹರೂ ಅವರಿಂದ ಹಿಡಿದು ಹಿಂದಿನ ಕಾಂಗ್ರೆಸ್ ಸರ್ಕಾರಗಳು ಮಾಡಿದ ತಪ್ಪುಗಳ ನೋವನ್ನು ಭಾರತ ಇನ್ನೂ ಅನುಭವಿಸುತ್ತಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries