ನವದೆಹಲಿ: ಬಾಲಿವುಡ್ನ 'ಬಂಟಿ ಔರ್ ಬಬ್ಲಿ' ಚಿತ್ರದಿಂದ ಪ್ರೇರಿತರಾಗಿ ಟಿವಿ ಧಾರಾವಾಹಿ ನಿರ್ಮಾಪಕರು ಮತ್ತು ನಿರ್ದೇಶಕರು ಎಂದು ನಂಬಿಸಿ ಹಲವರಿಗೆ ವಂಚಿಸಿದ ಆರೋಪದ ಮೇಲೆ ವ್ಯಕ್ತಿ ಮತ್ತು ಮಹಿಳೆಯೊಬ್ಬರನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಲಖನೌ ನಿವಾಸಿ ತರುಣ್ ಶೇಖರ್ ಶರ್ಮಾ (32) ಮತ್ತು ದೆಹಲಿ ನಿವಾಸಿ ಆಶಾ ಸಿಂಗ್ ಅಲಿಯಾಸ್ ಭಾವನಾ (29) ಎಂದು ಗುರುತಿಸಲಾಗಿದೆ.
ಇವರಿಬ್ಬರ ವಿರುದ್ಧ ದೆಹಲಿ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಸೇರಿದಂತೆ ದೇಶದಾದ್ಯಂತ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಡಿಸಿಪಿ ಅಮಿತ್ ಗೋಯಲ್ ಮಾಹಿತಿ ನೀಡಿದ್ದಾರೆ.
ಜನಪ್ರಿಯ ಟಿವಿ ಧಾರವಾಹಿಗಳು ಮತ್ತು ಒಟಿಟಿ ಕಾರ್ಯಕ್ರಮಗಳಲ್ಲಿ ಪಾತ್ರಗಳನ್ನು ನೀಡುವುದಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಆಕಾಂಕ್ಷಿಗಳನ್ನು ಆಕರ್ಷಿಸುತ್ತಿದ್ದರು. ಇತ್ತೀಚಿನ ಪ್ರಕರಣದಲ್ಲಿ, ದೂರುದಾರರಿಂದ ₹24 ಲಕ್ಷ ವಂಚನೆ ಮಾಡಲಾಗಿದೆ ಎಂದು ಗೋಯಲ್ ಹೇಳಿದ್ದಾರೆ.
ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಬೆಂಗಳೂರಿನ ಅಪಾರ್ಟ್ಮೆಂಟ್ವೊಂದರಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಬಳಿ ಏಳು ಮೊಬೈಲ್ ಫೋನ್ಗಳು, 10 ಸಿಮ್ ಕಾರ್ಡ್ಗಳು, 15 ಬ್ಯಾಂಕ್ಗಳ ಪಾಸ್ಬುಕ್, ಚೆಕ್ಬುಕ್, ಎಂಟು ಎಟಿಎಂ ಕಾರ್ಡ್ಗಳು ಸೇರಿದಂತೆ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




