ನವದೆಹಲಿ: ಶ್ರೀನಗರ ವಿಮಾನ ನಿಲ್ದಾಣದ ಬೋರ್ಡಿಂಗ್ ಗೇಟ್ ಬಳಿ ಹಿರಿಯ ಸೇನಾಧಿಕಾರಿಯೊಬ್ಬರು ಸ್ಪೈಸ್ಜೆಟ್ ಸಂಸ್ಥೆಯ ಎಸ್ಜಿ-386 ವಿಮಾನದ ನಾಲ್ವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ಜುಲೈ 26ರಂದು ನಡೆದ ಈ ಘಟನೆಯಲ್ಲಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರಿಗೆ ಬೆನ್ನುಮೂಳೆ ಮುರಿದಿದ್ದು, ದವಡೆಗೆ ಗಂಭೀರ ಗಾಯಗಳಾಗಿವೆ ಎಂದು ಸ್ಪೈಸ್ಜೆಟ್ ವಕ್ತಾರರು ತಿಳಿಸಿದ್ದಾರೆ.
'ನಮ್ಮ ಸಿಬ್ಬಂದಿಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದರು ಕೂಡ ಬಿದಡೆ ಸೇನಾಧಿಕಾರಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಅವರು ಹೇಳಿದ್ದಾರೆ.
'ಸೇನಾಧಿಕಾರಿಯ ಬಳಿ ಇದ್ದ ಬ್ಯಾಗ್ ಕ್ಯಾಬಿನ್ ಬ್ಯಾಗೇಜ್ಗೆ ನಿಗದಿಪಡಿಸಿರುವ ತೂಕಕ್ಕಿಂತ ಹೆಚ್ಚು ಇತ್ತು. ನಿಯಮದ ಪ್ರಕಾರ ಅದನ್ನು ಕ್ಯಾಬಿನ್ನಿಂದ ಕಾರ್ಗೊ ವಿಭಾಗಕ್ಕೆ ಸ್ಥಳಾಂತರಿಸುವುದಾಗಿ ಸಿಬ್ಬಂದಿ ಹೇಳಿದ್ದರು. ಆದರೆ, ಆತ ಇದಕ್ಕೆ ಒಪ್ಪಿರಲಿಲ್ಲ. ಬೋರ್ಡಿಂಗ್ ಪ್ರಕ್ರಿಯೆ ಪೂರ್ಣಗೊಳಿಸದೆ ಬಲವಂತವಾಗಿ ಏರೋಬ್ರಿಡ್ಜ್ಗೆ ಪ್ರವೇಶಿಸಿದ್ದರು' ಎಂದು ಸ್ಪೈಸ್ಜೆಟ್ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ನಮ್ಮ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕನ (ಸೇನಾಧಿಕಾರಿ) ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಜತೆಗೆ, ಆತನನ್ನು ವಿಮಾನ ಹಾರಾಟ ನಿಷೇಧ ಪಟ್ಟಿಗೆ ಸೇರಿಸಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.




