ಉಪ್ಪಳ : ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ 'ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ' ಎಂಬ ಕಾರ್ಯಕ್ರಮದ ಅಂಗವಾಗಿ ಹಿರಿಯ ಸಾಹಿತಿ ಬಿ. ಸತ್ಯವತಿ ಭಟ್ ಕೊಳಚಪ್ಪು ಅವರನ್ನು ಪೈವಳಿಕೆಯ ಸಮೀಪದ ಕೊಳಚಪ್ಪುವಿನಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಸತ್ಯವತಿ ಅವರನ್ನು ಶಾಲು ಹೊದೆಸಿ ಅಭಿನಂದಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ, ಸಾಹಿತಿ ಪ್ರೊ.ಪಿ.ಎನ್. ಮೂಡಿತ್ತಾಯ ಅಭಿನಂದನಾ ಭಾಷಣ ಮಾಡಿದರು.
ಸತ್ಯವತಿ ಭಟ್ ಕೊಳಚಪ್ಪು ಅವರು ಅಂಬಾ ಅಂಬಾ, ಗೊಂಚಲು ಕವನ ಸಂಕಲನಗಳ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿ ಕಾಮನಬಿಲ್ಲು, ನವಿಲಗರಿ, ಮುತ್ತು ಅಮ್ಮನ ಕೈ ತುತ್ತು, ಸ್ವಾತಿಮುತ್ತು, ದಿಗಂತದಾಚೆಗಿನ ನೋಟಗಳು, ಮತ್ತೆ ನಕ್ಕಳು ಪ್ರಕೃತಿ, ಕುಂದಣದ ಹರಳುಗಳು, ಮುಷ್ಟಿ ಸಮಷ್ಟಿ ಮೊದಲಾದ ಹತ್ತು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಸಾಹಿತ್ಯ ಕೃಷಿ ಮಾತ್ರವಲ್ಲದೆ ಜೇನು ಸಾಕಣೆ, ಕಸೂತಿ, ಈಜು, ಯೋಗ, ಪ್ರಾಣಾಯಾಮ ಎಲ್ಲದರಲ್ಲೂ ಸೈ ಎನಿಸಿಕೊಂಡವರು ಎಂದು ಪ್ರೊ. ಪಿ. ಎನ್. ಮೂಡಿತ್ತಾಯ ಹೇಳಿದರು. ಸತ್ಯವತಿ ಭಟ್ ಅವರ ಸಾಧನೆ, ಜೀವನೋತ್ಸಾಹ ಮಹಿಳೆಯರಿಗೆ ಸಾಧನೆ ಮಾಡಲು ಸ್ಫೂರ್ತಿ ನೀಡಬಲ್ಲುದು ಎಂದು ಅವರು ಹೇಳಿದರು.
ಮೀಂಜ ಕೊಳಚಪ್ಪು ಶ್ರೀಶಾಸ್ತಾವೇಶ್ವರ ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ.ಕೆ., ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಸಾಹಿತಿ ಲತೀಶ್ ಸಂಕೋಳಿಗೆ, ಬಿ.ಮಹಾಬಲ ತಿಲಕ, ಸುಬ್ರಹ್ಮಣ್ಯ ಭಟ್ ಕೊಳಚಪ್ಪು, ಮಹಾವೀರ ಶಿವಮೊಗ್ಗ, ಸವಿತಾ ಶಿವಮೊಗ್ಗ ಉಪಸ್ಥಿತರಿದ್ದರು. ಸತ್ಯವತಿ ಭಟ್ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಡಾ. ರಮಾನಂದ ಬನಾರಿಯವರ ಕವನಗಳನ್ನು ಓದಿ ಸ್ಫೂರ್ತಿ ಪಡೆದು ತಾನು ಸಾಹಿತ್ಯ ಕೃಷಿಯನ್ನು ಆರಂಭಿಸಿದೆ. ಮನೆಯವರ ಪ್ರೋತ್ಸಾಹ ಈ ಇಳಿವಯಸ್ಸಿನಲ್ಲೂ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿತು ಎಂದು ಸತ್ಯವತಿ ಭಟ್ ಹೇಳಿದರು.
ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕಿ ಸಾವಿತ್ರಿ ವಂದಿಸಿದರು.




.jpg)
.jpg)
