ಬದಿಯಡ್ಕ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಬದಿಯಡ್ಕ ಘಟಕದ ವಾರ್ಷಿಕ ಮಹಾಸಭೆ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದ ಸಭಾ ಭವನದಲ್ಲಿ ಮಂಗಳವಾರ ಜರಗಿತು. ಘಟಕದ ಅಧ್ಯಕ್ಷ ಬಾಲಕೃಷ್ಣ ಎನ್. ಧ್ವಜಾರೋಹಣಗೈದು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಕೆಪಿಎ ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ವೇಣು ವಿ.ವಿ., ಜಿಲ್ಲಾ ಕ್ರೀಡಾ ಸಂಚಾಲಕ ನಿತ್ಯಪ್ರಸಾದ್, ಕುಂಬಳೆ ವಲಯ ಕಾರ್ಯದರ್ಶಿ ಹಾಗೂ ಬದಿಯಡ್ಕ ಘಟಕ ಉಸ್ತುವಾರಿ ಸುರೇಶ್ ಆಚಾರ್ಯ, ಕುಂಬಳೆ ವಲಯ ಕೋಶಾಧಿಕಾರಿ ವೇಣುಗೋಪಾಲ ನೀರ್ಚಾಲು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಳೆದ 46 ವರ್ಷಗಳಿಂದ ಛಾಯಾಗ್ರಹಣ ರಂಗದಲ್ಲಿ ದುಡಿಯುತ್ತಾ ಹೈನುಗಾರಿಕೆಯಲ್ಲೂ ಅಪಾರ ಸಾಧನೆಗೈದ ಶ್ರೀಕೃಷ್ಣ ಭಟ್ ಪೆರ್ಲ ಅವರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಬದಿಯಡ್ಕ ಘಟಕದ ಕಾರ್ಯದರ್ಶಿ ನಾರಾಯಣ ವಾರ್ಷಿಕ ವರದಿ, ಕೋಶಾಧಿಕಾರಿ ಹರ್ಷಕುಮಾರ್ ಕೀರಿಕ್ಕಾಡು ಲೆಕ್ಕಪತ್ರ ಮಂಡಿಸಿದರು. ಉದಯ ಕಂಬಾರು ಪ್ರಾರ್ಥನೆ ಹಾಡಿದರು. ಉದಯ ಕುಮಾರ್ ಮೈಕುರಿ ವಂದಿಸಿದರು. ಶ್ಯಾಮಪ್ರಸಾದ ಸರಳಿ ಕಾರ್ಯಕ್ರಮ ನಿರೂಪಿಸಿದರು.






