HEALTH TIPS

Cyclone Alert: 'ದಿತ್ವಾ' ಚಂಡಮಾರುತ ನಾಳೆ ಚೆನ್ನೈಗೆ ಅಪ್ಪಳಿಸುವ ಸಾಧ್ಯತೆ

 ಚೆನ್ನೈ: ಶ್ರೀಲಂಕಾದಲ್ಲಿ ಭಾರಿ ಮಳೆ ಹಾಗೂ ಪ್ರವಾಹಕ್ಕೆ ಕಾರಣವಾಗಿರುವ 'ದಿತ್ವಾ' ಚಂಡಮಾರುತವು ನವೆಂಬರ್‌ 30ರಂದು ತಮಿಳುನಾಡು ಮತ್ತು ಪುದುಚೇರಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಶುಕ್ರವಾರ ಪುದುಚೇರಿಯ ಆಗ್ನೇಯಕ್ಕೆ 430 ಕಿ.ಮೀ.

ಮತ್ತು ಚೆನ್ನೈನಿಂದ ದಕ್ಷಿಣಕ್ಕೆ 530 ಕಿ.ಮೀ. ದೂರದಲ್ಲಿದ್ದ ಚಂಡಮಾರುತವು ಶ್ರೀಲಂಕಾ ಕರಾವಳಿ ಮತ್ತು ಬಂಗಾಳ ಕೊಲ್ಲಿ ಮೂಲಕ ಚಲಿಸುವ ಸಾಧ್ಯತೆಯಿದೆ. ಭಾನುವಾರ ಬೆಳಿಗ್ಗೆ ಉತ್ತರ ತಮಿಳುನಾಡು, ಪುದುಚೇರಿ ಹಾಗೂ ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸಬಹುದು ಎಂದು ಹೇಳಿದೆ. 


ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಸರ್ಕಾರ ಎಚ್ಚರಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿದರು. 'ನ.29 ಮತ್ತು 30ರಂದು ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ರೆಡ್ ಅಲರ್ಟ್ ಘೋಷಿಸಲಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದ್ದೇನೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಶ್ರೀಲಂಕಾದಲ್ಲಿ 56 ಸಾವು (ಕೊಲಂಬೊ ವರದಿ): ಶ್ರೀಲಂಕಾದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಹಾಗೂ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಕಳೆದ 72 ಗಂಟೆಗಳಲ್ಲಿ 46 ಸಾವು ವರದಿಯಾಗಿವೆ. 21 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (ಡಿಎಂಸಿ) ತಿಳಿಸಿದೆ.

'ದಿತ್ವಾ' ಚಂಡಮಾರುತವು ಶ್ರೀಲಂಕಾದ ಪೂರ್ವ ಭಾಗದ ಟ್ರಿಂಕೊಮಲಿ ಜಿಲ್ಲೆಯತ್ತ ಚಲಿಸಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ಬೆಳಿಗ್ಗೆ ಪ್ರಕಟಿಸಿದೆ. ದೇಶದ ಬಹುತೇಕ ಭಾಗಗಳಲ್ಲಿ ಗಂಟೆಗೆ 80ರಿಂದ 90 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಭಾರಿ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದೆ. ಕೆಲವು ಪ್ರಾಂತ್ಯಗಳಲ್ಲಿ 200 ಮಿ.ಮೀ. ಮಳೆಯಾಗುವ ಸಾಧ್ಯತೆಯಿದೆ ಎಂದಿದೆ.

ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ತನ್ನ ಕೆಲವು ವಿಮಾನಗಳನ್ನು ಕೇರಳದ ಕೊಚ್ಚಿ ಮತ್ತು ತಿರುವನಂತಪುರದ ವಿಮಾನ ನಿಲ್ದಾಣಗಳಲ್ಲಿ ಇಳಿಸಲಾಗಿದೆ ಎಂದು ಶ್ರೀಲಂಕಾ ಏರ್‌ಲೈನ್ಸ್‌ ತಿಳಿಸಿದೆ.

ಶುಕ್ರವಾರ ಬೆಳಿಗ್ಗೆಯಿಂದ ಎಲ್ಲ ರೈಲುಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಗಂಪೋಲಾ ಪ್ರಾಂತ್ಯದ ರೈಲು ನಿಲ್ದಾಣ ಜಲಾವೃತಗೊಂಡಿದ್ದು, ಹಲವು ರೈಲುಗಳು ನೀರಿನಲ್ಲಿ ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ನೆರವಿನ ಹಸ್ತ

ನವದೆಹಲಿ: 'ದಿತ್ವಾ'ದಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ಭಾರತ ನೆರವಿನ ಹಸ್ತ ಚಾಚಿದ್ದು ಅಗತ್ಯ ಪರಿಹಾರ ಸಾಮಗ್ರಿಗಳನ್ನು ಶುಕ್ರವಾರ ತಲುಪಿಸಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಸಹಾಯ ಒದಗಿಸಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಶ್ರೀಲಂಕಾಕ್ಕೆ ನೆರವು ನೀಡಲು ಭಾರತವು 'ಆಪರೇಷನ್ ಸಾಗರ ಬಂಧು' ಆರಂಭಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ತಿಳಿಸಿದರು. ಭಾರತೀಯ ನೌಕಾಪಡೆಯ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ಉದಯಗಿರಿ ನೌಕೆಗಳ ಮೂಲಕ ಮೊದಲ ಹಂತದ ಪರಿಹಾರ ಸಾಮಗ್ರಿಗಳನ್ನು ಶ್ರೀಲಂಕಾಕ್ಕೆ ಕಳುಹಿಸಲಾಗಿದೆ ಎಂದರು. ಐಎನ್‌ಎಸ್ ವಿಕ್ರಾಂತ್ ನೌಕೆಯನ್ನು ಪೂರ್ವ ಕರಾವಳಿಯ ಟ್ರಿಂಕೊಮಲಿ ಪ್ರದೇಶದಲ್ಲಿ ಪ್ರವಾಹ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು ಎಂದು ಶ್ರೀಲಂಕಾದ ನೌಕಾಪಡೆ ತಿಳಿಸಿದೆ.











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries