ವಿಕಸಿತ್ ಭಾರತ್-ಉದ್ಯೋಗ ಖಾತರಿ ಹಾಗೂ ಅಜೀವಿಕಾ ಮಿಶನ್ (ಗ್ರಾಮೀಣ) ( ವಿಬಿ-ಜಿ ರಾಮ್ ಜಿ) ಮಸೂದೆಯನ್ನು ಪ್ರತಿಪಕ್ಷಗಳ ಪ್ರತಿಭಟನೆ ಹಾಗೂ ಸಭಾತ್ಯಾಗದ ನಡುವೆ ಗುರುವಾರ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅಂಗೀಕಾರಗೊಂಡಿತ್ತು.
ಮೋದಿ ಸರಕಾರವು MGNREGA ಕೈಬಿಟ್ಟು 'ಬಡವರ ವಿರೋಧಿ, ಜನ ವಿರೋಧಿ, ರೈತ ವಿರೋಧಿ, ಮಸೂದೆಯನ್ನು ಜಾರಿಗೆ ತಂದಿದೆಯೆಂದು ಟಿಎಂಸಿಯ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಆಪಾದಿಸಿದ್ದಾರೆ.
ಗುರುವಾರ ಲೋಕಸಭೆಯು ನಡುವೆ ಮಸೂದೆಯನ್ನು ಅನುಮೋದಿಸಿದ ಕೆಲವೇ ತಾಸುಗಳ ಬಳಿಕ, ತಡರಾತ್ರಿ ವೇಳೆಗೆ ಮಸೂದೆಯನ್ನು ರಾಜ್ಯಸಭೆಯು ಧ್ವನಿಮತದಿಂದ ಅಂಗೀಕರಿಸಿದೆ. ಜಿ ರಾಮ್ ಜಿ ಯೋಜನೆಯ 40 ಶೇ. ಅನುದಾನವನ್ನು ರಾಜ್ಯಸರಕಾರ ಭರಿಸುವಂತೆ ಮಾಡುವ ಮೂಲಕ ಕೇಂದ್ರ ಸರಕಾರವು ರಾಜ್ಯಗಳಿಗೆ ಆರ್ಥಿಕ ಹೊರೆಯನ್ನು ಹೊರಿಸಿದೆಯೆಂದು ಪ್ರತಿಪಕ್ಷಗಳು ಆಪಾದಿಸಿವೆ. ಮಸೂದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದ ರಾಜ್ಯಸಭಾದ ಪ್ರತಿಪಕ್ಷ ಸದಸ್ಯರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಮಸೂದೆಯ ಪ್ರತಿಗಳನ್ನು ಹರಿದುಹಾಕಿದರು ಮತ್ತು ಸಭಾತ್ಯಾಗ ಮಾಡಿದರು.
'ಜಿ ರಾಮ್ ಜಿ' ಯೋಜನೆಯು ಭಾರತದ ಬಡವರಿಗೆ, ಮಹಾತ್ಮಾ ಗಾಂಧೀಜಿಯವರಿಗೆ, ರವೀಂದ್ರನಾಥ ಠಾಗೂರ್ ಅವರಿಗೆ ಮಾಡಿದ ಅಪಮಾನವಾಗಿದೆ. ಕೇವಲ ಐದು ತಾಸುಗಳಿಗೆ ನೋಟಿಸ್ ನೀಡಿ, ಈ ಮಸೂದೆಯನ್ನು ಮಂಡಿಸಲಾಗಿದೆ. ನಮಗೆ ಮಸೂದೆ ಬಗ್ಗೆ ಸಮರ್ಪಕವಾಗಿ ಚರ್ಚಿಸಲು ಆಸ್ಪದ ನೀಡಲಿಲ್ಲ'' ಎಂದು ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಹೇಳಿದರು.

