ಬದಿಯಡ್ಕ: 25 ವರ್ಷಗಳ ನಂತರ ಬದಿಯಡ್ಕದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿದೆ. ಊರಿನ ಜನರ ಪ್ರಾರ್ಥನೆ, ಕಾರ್ಯಕರ್ತರ ಒಗ್ಗಟ್ಟಿನ ಶ್ರಮ ಈ ಗೆಲುವಿನ ಹಿಂದಿದೆ. ನಾಡಿನ ಸಮಗ್ರ ಅಭಿವೃದ್ಧಿಗೆ ನಾವೆಲ್ಲ ಜೊತೆಯಾಗಿ ಮುಂದುವರಿಯುತ್ತೇವೆ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಹೇಳಿದರು.
ಕ್ಯಾಂಪ್ಕೋ ಬದಿಯಡ್ಕ ಶಾಖೆಯ ವತಿಯಿಂದ ಗುರುವಾರ ನಡೆದ ವಿಜೇತ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ಯಾಂಪ್ಕೋ ಸ್ಥಾನೀಯ ಪ್ರಬಂಧಕ ಚಂದ್ರ ಎಂ. ಮಾತನಾಡಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಇಂದು ಅನೇಕ ಜನಪರ ಯೋಜನೆಗಳ ಮೂಲಕ ಜನಮಾನಸವನ್ನು ಗೆದ್ದಿದೆ. ಅದೇ ರೀತಿ ಕೇರಳದ ರಾಜಕಾರಣದಲ್ಲಿ ಉತ್ತಮ ಆಡಳಿತವನ್ನು ನೀಡಲು ಲಭಿಸಿದ ಅವಕಾಶವನ್ನು ಜನಸೇವೆಗಾಗಿ ಮೀಸಲಿಟ್ಟು ನಾಡಿನ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳ ಮೂಲಕ ಜನತೆಗೆ ನೆರವಾಗಿ ಎಂದು ಶುಭನುಡಿದರು.
ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಗ್ರಾಮಪಂಚಾಯಿತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೆ., ಮಧುಸೂದನ ಉಕ್ಕಿನಡ್ಕ, ಶ್ಯಾಮಪ್ರಸಾದ ಸರಳಿ, ಉಷಾ ಪಳ್ಳತ್ತಡ್ಕ, ಹರೀಶ ಮಜಿರ್ಪಳ್ಳಕಟ್ಟೆ, ಬಿಂದ್ಯಾ ಕಾರ್ತಿಕ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸಂಸ್ಥೆಯ ಸ್ವಾಗತ್ ಸ್ವಾಗತಿಸಿ, ಬದಿಯಡ್ಕ ಶಾಖಾ ಪ್ರಬಂಧಕ ಶ್ಯಾಂಪ್ರಶಾಂತ ಬಿ. ವಂದಿಸಿದರು.

.jpg)
