ಮುಂಬೈ: ಮುಂಬೈ ವಿಶ್ವವಿದ್ಯಾನಿಲಯದ ಉರ್ದು ವಿಭಾಗ ಫೆಬ್ರವರಿ 1ರಂದು ಆಯೋಜಿಸಿದ್ದ ಹಾಗೂ ನಟ ನಾಸಿರುದ್ದೀನ್ ಶಾ ಭಾಗವಹಿಸಲಿದ್ದ ಕವನ ಹಾಗೂ ಕಥೆ ಓದುವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಈ ಬಗ್ಗೆ ನಾಸಿರುದ್ದೀನ್ ಶಾ ಅವರು ತನ್ನನ್ನು ಕೊನೆ ಕ್ಷಣದಲ್ಲಿ ಆಹ್ವಾನಿಸಿಲ್ಲ ಎಂದು ಹೇಳಿದ್ದಾರೆ.
ಉರ್ದು ವಿಭಾಗದ ಮುಖ್ಯಸ್ಥರು ಆರಂಭದಲ್ಲಿ ನಾಸಿರುದ್ದೀನ್ ಶಾ ಅವರೇ ಕಾರ್ಯಕ್ರಮದಿಂದ ಹೊರಗುಳಿದಿದ್ದರು ಎಂದು ಹೇಳಿದ್ದಾರೆ. ಅನಂತರ ಬಜ್ಮ್-ಎ-ಅಹ್ಬಾಬ್ ಪ್ರತಿಷ್ಠಾನ ರದ್ದುಗೊಳಿಸಿರಬಹುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಬಜ್ಮ್-ಎ-ಅಹ್ಬಾಬ್ ಪ್ರತಿಷ್ಠಾನದ ಪ್ರತಿನಿಧಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಮುಂಬೈಯ ಕಲೀನಾದಲ್ಲಿರುವ ವಿಶ್ವವಿದ್ಯಾನಿಲಯದ ಉರ್ದು ಭಾಷೆಯ ಆಚರಣೆಯ ಭಾಗವಾಗಿ 'ಪ್ರೀತ್ ನಗರ್' ಶೀರ್ಷಿಕೆಯಲ್ಲಿ ಕವನ ಹಾಗೂ ಕತೆ ಓದುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಹಿರ್ ಲುಧಿಯನ್ವಿ ಹಾಗೂ ಫೈಝ್ ಅಹ್ಮದ್ ಫೈಝ್ ಮೊದಲಾದ ಕವಿಗಳ ಕವನಗಳನ್ನು ಓದಲು ಉದ್ದೇಶಿಸಲಾಗಿತ್ತು.
ಜನವರಿ 31ರಂದು ತಡ ರಾತ್ರಿ ಕಾರ್ಯಕ್ರಮ ರದ್ದಾಗಿರುವುದಾಗಿ ತಿಳಿಸಲಾಗಿತ್ತು ಎಂದು ಶಾ ಹೇಳಿದ್ದಾರೆ. ಘಝಲ್ ಶೇಖ್ ಎಂಬ ವ್ಯಕ್ತಿಯಿಂದ ತನಮಗೆ ಇಮೇಲ್ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.
ಗುರುವಾರ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಶಾ ಅವರು, ಕಾರ್ಯಕ್ರಮ ರದ್ದುಗೊಳಿಸಿರುವುದಕ್ಕೆ ವಿಶ್ವವಿದ್ಯಾನಿಲಯ ಯಾವುದೇ ಕಾರಣ ನೀಡಿಲ್ಲ ಅಥವಾ ಕ್ಷಮೆ ಯಾಚಿಸಿಲ್ಲ ಎಂದು ಆರೋಪಿಸಿದ್ದಾರೆ. ತಾನು ದೇಶದ ವಿರುದ್ಧ ಹೇಳಿಕೆಗಳನ್ನು ನೀಡುತ್ತೇನೆ ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಆದರೆ, ಅದು ವಾಸ್ತವವಲ್ಲ. ತಾನು ಎಂದಿಗೂ ಅಂತಹ ಹೇಳಿಕೆ ನೀಡಿಲ್ಲ ಎಂದು ನಾಸಿರುದ್ದೀನ್ ಶಾ ಹೇಳಿದ್ದಾರೆ.

