ಕೊರಾಡ್: 'ಅಜಿತ್ ಪವಾರ್ ಅವರ ನೇತೃತ್ವದಲ್ಲಿ ಎನ್ಸಿಪಿಯು ಬಿಜೆಪಿ ನೇತೃತ್ವದ ಎನ್ಡಿಎ ಸೇರ್ಪಡೆಯಾಗಿತ್ತು. ಈಗ ಅವರ ನಿಧನದ ನಂತರವೂ ಆಡಳಿತಾರೂಢ ಪಕ್ಷಗಳ ಕೂಟದೊಂದಿಗೇ ಎನ್ಸಿಪಿ ಮುಂದುವರಿಯಲಿದೆ' ಎಂದು ಮಹಾರಾಷ್ಟ್ರ ಎನ್ಸಿಪಿ ಅಧ್ಯಕ್ಷ ಸುನಿಲ್ ತಟಕರೆ ಸೋಮವಾರ ತಿಳಿಸಿದರು.
ಪಕ್ಷವು ಶರದ್ ಪವಾರ್ ನೇತೃತ್ವದ ಎನ್ಸಿಪಿ ಜೊತೆಗೆ ವಿಲೀನಗೊಳ್ಳಲಿದೆ ಎಂಬ ವದಂತಿ ಹರಿದಾಡಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದರು.
ಉಪಮುಖ್ಯಮಂತ್ರಿ, ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಎನ್ಸಿಪಿ ಶಾಸಕಾಂಗ ಪಕ್ಷದ ಮುಖ್ಯಸ್ಥೆಯನ್ನಾಗಿ ನೇಮಿಸಿರುವುದು ಪಕ್ಷದ ನಿರ್ಧಾರ. ಇದಕ್ಕೂ ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
'ಯಾವ ಪಕ್ಷವು ಯಾವುದರೊಂದಿಗೆ ವಿಲೀನವಾಗಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಎನ್ಡಿಎ ಜೊತೆ ಸೇರಿರುವ ಅಜಿತ್ ಪವಾರ್ ಅವರ ನಿರ್ಧಾರಕ್ಕೆ 2024ರ ಚುನಾವಣೆಯಲ್ಲಿ ರಾಜ್ಯದ ಜನರು ಒಪ್ಪಿಗೆ ನೀಡಿದ್ದಾರೆ. ಪಕ್ಷದ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಎನ್ಸಿಪಿ ಶಕ್ತವಾಗಿದೆ' ಎಂದು ಒತ್ತಿ ಹೇಳಿದರು.
ಈ ಮಧ್ಯೆ 'ಎನ್ಸಿಪಿ ಬಣಗಳ ವಿಲೀನ ಕುರಿತು ಮಾತುಕತೆಯು ಆರಂಭಿಕ ಹಂತದಲ್ಲಿದೆ. ಅಜಿತ್ ಪವಾರ್ ಅವರು ಫೆಬ್ರುವರಿ 12ರಂದು ವಿಲೀನ ಕುರಿತಂತೆ ಘೋಷಣೆ ಮಾಡಲು ದಿನಾಂಕ ನಿಗದಿ ಮಾಡಿದ್ದರು' ಎಂದು ಶರದ್ ಪವಾರ್ ಅವರು ಹೇಳಿದ್ದಾರೆ.
'ಸುನೇತ್ರಾ ಆಯ್ಕೆ ಹಿಂದೆ ಬಿಜೆಪಿ ಕೈವಾಡ'
ಮುಂಬೈ: ಎನ್ಸಿಪಿ ನಾಯಕಿ ಸುನೇತ್ರಾ ಪವಾರ್ ಅವರನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಿರುವ ತಂತ್ರದ ಹಿಂದೆ ಬಿಜೆಪಿ ನಾಯಕತ್ವದ ಕೈವಾಡವಿದೆ ಎಂದು ಶಿವಸೇನಾ (ಉದ್ಧವ್ ಬಣ) ಸೋಮವಾರ ಆರೋಪಿಸಿದೆ. ಬಿಜೆಪಿ ನಾಯಕತ್ವ ಮತ್ತು ಎನ್ಸಿಪಿ ನಾಯಕರಾದ ಸುನಿಲ್ ತಟಕರೆ ಪ್ರಫುಲ್ ಪಟೇಲ್ ಅವರಿಗೆ ಎನ್ಸಿಪಿ ಬಣಗಳ ವಿಲೀನ ಬೇಕಿಲ್ಲ ಎಂದು ಶಿವಸೇನಾ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಆರೋಪಿಸಲಾಗಿದೆ. ಸುನೇತ್ರಾ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ಸುಳಿವೇ ಇರಲಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. 'ಸುನೇತ್ರಾ ಪವಾರ್ ಅವರ ಉಪಮುಖ್ಯಮಂತ್ರಿ ಹುದ್ದೆಯು ಆಲಂಕಾರಿಕವಾಗಬಾರದು. ಅವರು ಮೂಕ ಬೊಂಬೆಯಾಗಿರದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು' ಎಂದು ಹೇಳಿದೆ. ಸನಾತನ ಮನಃಸ್ಥಿತಿಯ ಬಿಜೆಪಿ ಜೊತೆಗಿನ ಎನ್ಸಿಪಿ ಮೈತ್ರಿ ಮತ್ತು ಅಜಿತ್ ಪವಾರ್ ಅವರ ನಿಧದ ನಂತರದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸದೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಹಿಂದುತ್ವದ ನಂಬಿಕೆಗಳಿಗೆ ಸರಿಹೊಂದುವುದಿಲ್ಲ ಎಂದೂ ಅದು ಟೀಕಿಸಿದೆ.

