ಕಾಸರಗೋಡು: ದಕ್ಷಿಣದ ಕಾಶಿಯೆಂದೇ ಖ್ಯಾತಿ ಪಡೆದಿರುವ ಬೇಕಲ ಸನಿಹದ ತ್ರಿಕ್ಕನ್ನಾಡು ತ್ರಯಂಬಕೇಶ್ವರ ದೆವಸ್ಥಾನದಲ್ಲಿ ಕುಂಭ ಮಾಸದ ಅಮವಾಸ್ಯೆ ಹಿನ್ನೆಲೆಯಲ್ಲಿ ಪಿತೃ ತರ್ಪಣ ಕಾರ್ಯಕ್ರಮ ಮಂಗಳವಾರ ನೆರವೇರಿತು.
ಬೆಳಗ್ಗೆ 6ರಿಂದ ಆರಂಭಗೊಂಡ ಪಿತೃತರ್ಪಣ ಪ್ರಕ್ರಿಯೆ ಮಧ್ಯಾಹ್ನದ ವರೆಗೂ ನಡೆಯಿತು. ನೂರಾರು ಮಂದಿ ಪಿತೃತರ್ಪಣ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ನವೀನ್ಚಂದ್ರ ಕಾಯರ್ತಾಯ ಅವರ ನೇತೃತ್ವದಲ್ಲಿ ವಿಶೇಷ ತಿಲಹೋಮಾದಿ ಕ್ರಿಯೆ ನಡೆಸಲಾಯಿತು. ದೇವಾಲಯದ ಕೆರೆಯಲ್ಲಿ ತೀರ್ಥಸ್ನಾನ ಕೈಗೊಮಡ ಭಕ್ತಾದಿಗಳು, ತಾಂಬೂಲಾದಿ ದಕ್ಷಿಣೆ ಸಮರ್ಪಿಸಿ, ಮುಖ್ಯ ಅರ್ಚಕರಿಂದ ಅಕ್ಕಿ, ಹೂವು ಸ್ವೀಕರಿಸಿ ಸಮುದ್ರ ದಡದಲ್ಲಿ ವಿಶೇಷವಾಗಿ ನಿರ್ಮಿಸಲಾದ ಚಪ್ಪರದಲ್ಲಿ ಪಿತೃತರ್ಪಣ ಕ್ರಿಯೆಗಳನ್ನು ಪೂರೈಸಿ,ಸಮುದ್ರ ಸ್ನಾನ ನೆರವೇರಿಸಿದರು.

