ಕೊಚ್ಚಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಅಭ್ಯರ್ಥಿಗಳ ಚುನಾವಣಾ ಉಸ್ತುವಾರಿ ವೀಕ್ಷಕರಾಗಿ ದೇಶದ ವಿವಿಧ ರಾಜ್ಯಗಳ ಬಿಜೆಪಿ ಮುಖಂಡರನ್ನು ಮತ್ತು ಶಾಸಕರನ್ನು ಬಿಜೆಪಿ ಕೇಂದ್ರ ಸಮಿತಿ ನಿಯೋಜಿಸಿದೆ. ಪ್ರತಿ ಸಂಸದೀಯ ಕ್ಷೇತ್ರ ಹಾಗೂ ವಲಯಕ್ಕೆ ಒಬ್ಬರಂತೆ ವೀಕ್ಷಕರನ್ನು ನೇಮಿಸಿದ್ದು, ಚುನಾವಣಾ ನಿರ್ವಹಣೆಯನ್ನು ಬಿಜೆಪಿ ಕೇಂದ್ರ ಘಟಕ ವಹಿಸಲಿದೆ.
ಬಿಜೆಪಿ ಕೇಂದ್ರ ಸಮಿತಿ ತೀರ್ಮಾನದನ್ವಯ ಮಂಜೇಶ್ವರ, ಕಾಸರಗೋಡು ಒಳಗೊಂಡ ಕಾಸರಗೋಡು ಜಿಲ್ಲೆಯ ಉಸ್ತುವಾರಿಯನ್ನು ದ.ಕ ಜಿಲ್ಲಾ ಮಾಜಿ ಸಂಸದ, ಹಾಗೂ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಕಾಸರಗೋಡು ಒಳಗೊಂಡ ಕೋಯಿಕ್ಕೋಡ್ ಉತ್ತರ ವಲಯ ವಿಭಾಗ ಉಸ್ತುವಾರಿಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನೀಡಲಾಗಿದೆ.
ವಿಶೇಷವಾಗಿ ಬಿಜೆಪಿ ಎ ಕ್ಲಾಸ್ ವಿಧಾನಸಭಾ ಕ್ಷೇತ್ರಗಳೆಂದು ಪರಿಗಣಿಸಿದ 35ವಿಧಾನಸಭಾ ಮಂಡಲಗಳ ಮೇಲೆ ವಿಶೇಷ ನಿಗಾ ಇರಿಸಲು ಇವರಿಗೆ ಪಕ್ಷದ ಆದೇಶವಾಗಿದೆ. ಕರ್ನಾಟಕದ ಹೊರತು ಜಾರ್ಖಂಡ್ ಸಹಿತ ಉತ್ತರ ಭಾರತದ ಕೆಲವು ಮುಖಂಡರಿಗೆ ಕೇರಳದ ಚುನಾವಣೆಯ ಜವಾಬ್ದಾರಿ ನೀಡಲಾಗಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯಿಂದ ತರಬೇತಿ ಪಡೆದವರನ್ನು ಕೇರಳಕ್ಕೆ ನಿಯೋಗಿಸಲಾಗುತ್ತಿದೆ. ಕಾಸರಗೋಡು ಜಿಲ್ಲಾ ಉಸ್ತುವಾರಿ ನಳಿನ್ ಕುಮಾರ್ ಕಟೀಲು ಈಗಾಗಲೇ ಬಿಜೆಪಿ ಕಾಸರಗೋಡುಜಿಲ್ಲಾ ಕಚೇರಿಗೆ ಆಗಮಿಸಿ ಜಿಲ್ಲೆಯ ನಾಯಕರೊಡನೆ ನಾಯಕತ್ವ ಸಭೆಯನ್ನೂ ನಡೆಸಿದ್ದಾರೆ. ಈ ಬಾರಿಯ ಕೇರಳ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಮುಖಂಡರು ಪ್ರತಿಷ್ಠೆಯ ಕಣವನ್ನಾಗಿ ಸ್ವೀಕರಿಸಿದ್ದು, ಗೆಲುವಿನ ಬಗ್ಗೆ ಕಾರ್ಯತಂತ್ರ ರೂಪಿಸಲು ವಿಶೇಷ ಪರಿಣತಿ ಪಡೆದ ಮುಖಂಡರನ್ನು ಕೇರಳಕ್ಕೆ ನಿಯೋಜಿಸಲಾಗಿದೆ.

