ನವದೆಹಲಿ: ಸರ್ಕಾರ ಚಿನ್ನದ ಬೆಲೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆಯಾಗುತ್ತದೆ. ಆದರೆ, 'ನಿರ್ದಿಷ್ಟ ಮಿತಿಗಳನ್ನು' ಮೀರಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ.
ಆರ್ಬಿಐನ ಕೇಂದ್ರೀಯ ನಿರ್ದೇಶಕರ ಮಂಡಳಿಯೊಂದಿಗಿನ ಬಜೆಟ್ ನಂತರದ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಚಿನ್ನ ಯಾವಾಗಲೂ ಸಾಮಾನ್ಯ ಜನರಿಗೆ ಹೂಡಿಕೆಯಾಗಿದೆ, ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಏರಿಕೆ ಕಂಡುಬರುತ್ತದೆ. ನಾವು ಅದನ್ನು ಗಮನಿಸುತ್ತಿದ್ದೇವೆ. ಆದರೆ, ಬೆಲೆಗಳು ನಿರ್ದಿಷ್ಟ ಮಿತಿಯನ್ನು ಮೀರಿ ಹೋಗಿಲ್ಲ' ಎಂದು ಹೇಳಿದರು.
ಐಡಿಬಿಐ ಬ್ಯಾಂಕಿನ ಬಗ್ಗೆ ಮಾತನಾಡಿದ ಸೀತಾರಾಮನ್, 'ಯಾವುದೇ ವ್ಯವಸ್ಥಿತ ರೀತಿಯ ಸಮಸ್ಯೆ ಇಲ್ಲ'. ನೀತಿಯ ವಿಷಯವಾಗಿ ಸರ್ಕಾರವು ವೈಯಕ್ತಿಕ ಕಂಪನಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು.
'ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಸಾಕಷ್ಟು ಲಿಕ್ವಿಡಿಟಿ (ಹಣ) ಲಭ್ಯವಿದೆ, ಐದು ವರ್ಷಗಳವರೆಗೆ ಸಾಲ ಪಡೆಯಬಹುದು ಮತ್ತು ಸರ್ಕಾರವು ದೇಶದ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಿದ್ಧವಾಗಿದೆ' ಎಂದು ಅವರು ಹೇಳಿದರು.

