ವಾರಣಾಸಿ: "ಪೊಲೀಸರು ನಮ್ಮನ್ನು ಬಂಧಿಸಲು ಕ್ರಮ ಕೈಗೊಂಡರೂ ನಾವು ವಿರೋಧಿಸುವುದಿಲ್ಲ; ಸಂಪೂರ್ಣ ಸಹಕಾರ ನೀಡುತ್ತೇವೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸುಳ್ಳುಗಳು ಶಾಶ್ವತವಾಗಿ ಉಳಿಯುವುದಿಲ್ಲ. ಇಂದು ಅಲ್ಲದಿದ್ದರೆ ನಾಳೆ, ನಾಳೆ ಇಲ್ಲದಿದ್ದರೆ ಮರುದಿನ ಸತ್ಯ ಬಹಿರಂಗಗೊಳ್ಳುತ್ತದೆ," ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ಪ್ರಯಾಗ್ರಾಜ್ ನಲ್ಲಿ ನಡೆದ ಘಟನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, "ನಾವು ಸದಾ ಕ್ಯಾಮೆರಾಗಳ ವ್ಯಾಪ್ತಿಯಲ್ಲಿದ್ದೆವು. ಪ್ರಯಾಗ್ ರಾಜ್ ನಲ್ಲಿ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಏನಾದರೂ ಸಂಭವಿಸಿದರೆ ವಾರ್ ರೂಮ್ ನಿಂದ ಮೇಲ್ವಿಚಾರಣೆ ಮಾಡಲು ಹಾಗೂ ಎಲ್ಲವನ್ನೂ ದಾಖಲಿಸಲು ವ್ಯವಸ್ಥೆ ಇದೆ. ಪೊಲೀಸ್ ದೌರ್ಜನ್ಯ ನಡೆದ ಬಳಿಕ ನಾವು ಕ್ಯಾಂಪ್ ಗೆ ಪ್ರವೇಶಿಸಲಿಲ್ಲ. ಅದರಿಂದ ನಮ್ಮ ಬಸ್ ಅನ್ನು ಕ್ಯಾಂಪ್ ನೊಳಗೆ ನಿಲ್ಲಿಸಲಾಗಿಲ್ಲ. ಈ ಸಂಪೂರ್ಣ ಘಟನೆ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿರಬೇಕು," ಎಂದು ಹೇಳಿದರು.
ಗುರುಕುಲದೊಂದಿಗೆ ಕೆಲವರ ಸಂಪರ್ಕವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, "ಆ ಹುಡುಗರು ನಮ್ಮ ಗುರುಕುಲಕ್ಕೆ ಎಂದಿಗೂ ಪ್ರವೇಶಿಸಲಿಲ್ಲ, ಇಲ್ಲಿ ಅಧ್ಯಯನ ಮಾಡಿಲ್ಲ. ನಮಗೆ ಅವರೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ಹಾರ್ದೋಯ್ ನಲ್ಲಿರುವ ಶಾಲೆಯ ವಿದ್ಯಾರ್ಥಿಗಳು. ಮೊಕದ್ದಮೆಯಲ್ಲಿ ಸಲ್ಲಿಸಲಾದ ಅವರ ಅಂಕಪಟ್ಟಿಗಳೇ ಇದಕ್ಕೆ ಸಾಕ್ಷಿ. ಈ ಸ್ಥಳದೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದಾಗ, ಯಾರಾದರೂ ಅವರಿಗೆ ಏನು ಮಾಡಬಹುದು?" ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಪ್ರಶ್ನಿಸಿದರು.
"ಕೆಲವರು 'ಒಂದು ಸಿಡಿ ಇದೆ' ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಅದನ್ನು ಏಕೆ ಸಾರ್ವಜನಿಕಗೊಳಿಸುವುದಿಲ್ಲ? ಇವೆಲ್ಲವೂ ಮುಂದಿನ ದಿನಗಳಲ್ಲಿ ಕೇಳಲಾಗುವ ಪ್ರಶ್ನೆಗಳು. ಅವರು ಉತ್ತರಿಸಬೇಕಾಗುತ್ತದೆ," ಎಂದರು.
"ಸನಾತನ ಧರ್ಮವನ್ನು ಹಾನಿಗೊಳಿಸಲು ಕೆಲವರು ನಿಲುವಂಗಿ ಧರಿಸಿ ಬಂದಿದ್ದಾರೆ. ತಮ್ಮನ್ನು ಹಿಂದೂಗಳೆಂದು ಕರೆದುಕೊಂಡು, ಹಿಂದೂಗಳ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ. ತಾವೇ ಹಿಂದೂಗಳೆಂದು ತೋರಿಸಿಕೊಂಡು ಈ ಕಾರ್ಯ ನಡೆಸುತ್ತಿದ್ದಾರೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು," ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಆರೋಪಿಸಿದರು.

