ಕಾಸರಗೋಡು: ಅತಿಸೂಕ್ಷ್ಮ ಮತದಾರ ಪಟ್ಟಿ ಪರಿಕ್ಷಕರಣೆ(ಎಸ್.ಐ.ಆರ್.) ಕೇರಳದಾದ್ಯಂತ ಹಲವು ಅಡೆತಡೆ-ಗೊಂದಲಗಳ ಮಧ್ಯೆ ನಡೆದು ಅಂತಿಮ ಹಂತದತ್ತ ತಲುಪುತ್ತಿದ್ದು, ಶನಿವಾರ ಕರಡು ಎಸ್.ಐ.ಆರ್. ಗೆ ಒಳಪಟ್ಟವರ ಪಟ್ಟಿ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನಜಾಗೃತಿಗಾಗಿ ರಾಜಗೋಪಾಲ ಕೈಪಂಗಳ ತಮ್ಮೂರಿನಿಂದ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಶನಿವಾರ ನಡೆಸಿದ ಸುಧೀರ್ಘ ಏಕವ್ಯಕ್ತಿ ಪಾದಯಾತ್ರೆ ಯಶಸ್ವಿಯಾಯಿತು.
ಬೆಳ್ಳೂರು ಗ್ರಾ.ಪಂ.ಯ ನೆಟ್ಟಣಿಗೆ ಸಮೀಪದ ಕೈಪಂಗಳ ನಿವಾಸಿ, ಪ್ರಗತಿಪರ ಕೃಷಿಕರೂ ಆಗಿರುವ ರಾಜಗೋಪಾಲ ಬೆಳ್ಳೂರು ಗ್ರಾ.ಪಂ. ಕಾರ್ಯಾಲಯದ ಮುಂದಿನಿಂದ ಶನಿವಾರ ಬೆಳಿಗ್ಗೆ 10ಕ್ಕೆ ಪಾದಯಾತ್ರೆಯನ್ನು ಆರಂಭಿಸಿದರು. ಬೆಳ್ಳೂರು, ಕಾರಡ್ಕ ಪಂಚಾಯತಿಯ ಮುಳ್ಳೇರಿಯ ಪೇಟೆ, ಕಾರಡ್ಕ, ಪೂವಡ್ಕ, ಮುಳಿಯಾರ್ ಪಂಚಾಯತಿಯ ಕೋಟೂರು, ಬೋವಿಕ್ಕಾನ,ಮಾಸ್ತಿಕುಂಡು, ಚೆಂಗಳ ಪಂಚಾಯತಿಯ ಚೆರ್ಕಳ, ನಾಯ್ಮಾರ್ ಮೂಲೆ, ವಿದ್ಯಾನಗರ ಮೂಲಕ ಸಿವಬಿಲ್ ಸ್ಟೇಶನ್ ನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂಜೆ 7.30ಕ್ಕೆ ಮುಕ್ತಾಯಗೊಳಿಸಿದರು.
ದಾರಿಯುದ್ದಕ್ಕೂ ನಾಗರಿಕರಲ್ಲಿ ಮತದಾರ ಕರಡು ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿ ಮಾಹಿತಿ ನೀಡಿದರು. ಹಲವೆಡೆ ಕುತೂಹಲಿಗಳಾದ ಯುವ ಸಮೂಹ ರಾಜಗೋಪಾಲರಿಂದ ಮಾಹಿತಿ ಪಡೆದು ಸೆಲ್ಪಿ ತೆಗೆದು ಸಂಭ್ರಮಿಸಿದರು. ಜೊತೆಗೆ ಪುಟ್ಟ ರೀಲ್ಸ್ ಗಳನ್ನೂ ಹರಿಯ ಬಿಟ್ಟಿರುವುದು ನಡಿಗೆಗೆ ಇನ್ನಷ್ಟು ವೇಗ ನೀಡಿತೆಂದು ರಾಜಗೋಪಾಲರು ತಿಳಿಸಿದರು.
ಮೀರಿದ ಸಮಯ:
ಆರಂಭದಲ್ಲಿ ಸಂಜೆ 4ರ ವೇಳೆಗೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಬಹುದೆಂದು ಅಂದಾಜಿಸಲಾಗಿತ್ತು. ಆದರೆ ಹಲವೆಡೆ ಜನರೊಂದಿಗಿನ ಸಂವಾದಕ್ಕೆ ತೆಗೆದುಕೊಂಡ ಹೊತ್ತಿನ ವಿಶಾಲತೆ ಮತ್ತು ಅತಿ ಬಿಸಿಲಿನ ಕಾರಣ ಗ್ರಹಿಸಿದ್ದ ವೇಗದಲ್ಲಿ ನಡೆಯಲು ಸಾಧ್ಯವಾಗದ್ದರಿಂದ ಮುಕ್ತಾಯ ಸಂಜೆ 7.30ರ ವರೆಗೆ ವಿಸ್ತರಿಸಲ್ಪಟ್ಟಿತು. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಮುಚ್ಚಲ್ಪಟ್ಟಿದ್ದರಿಂದ ಅಧಿಕಾರಿ ಮಟ್ಟದಲ್ಲಿ ಸ್ವಾಗತಿಸಲು ಯಾರೂ ಇದ್ದಿರಲಿಲ್ಲ.
ಬೆಂಬಲ:
ಕೋಟೂರಿನ ಸ್ಕಂದ ಪ್ಲಾಸ್ಟಿಕ್ಸ್ ಹಾಗೂ ನಿವೃತ್ತ ಶಿಕ್ಷಕ ಗೋವಿಂದ ಮಾಸ್ತರ್ ಬಳ್ಳಮೂಲೆ ರಾಜಗೋಪಾಲರಿಗೆ ಬೆಂಬಲ ನೀಡಿದರು. ಬಳ್ಳಮೂಲೆ ಗೋವಿಂದ ಮಾಸ್ತರ್ ಅವರು ಸುಧೀಘ್ ಹೊತ್ತು ರಾಜಗೋಪಾಲರ ಪ್ರಯಾಣದಲ್ಲಿದ್ದು ಬೆಂಬಲ ನೀಡಿದರು.

-side.jpg)
-side%202.jpg)
.jpg)
.jpg)
