ಬದಿಯಡ್ಕ: ಭಜನಾ ಮಂದಿರಗಳಲ್ಲಿ ಧಾರ್ಮಿಕ ಚಟುವಟಿಕೆಗಳು ನಿರಂತರ ನಡೆಯಬೇಕು. ಕಲಿಯುಗದಲ್ಲಿ ಹರಿನಾಮ ಜಪದಿಂದ ವಿಶೇಷ ಶಕ್ತಿ ಉಂಟಾಗುತ್ತದೆ. ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವ ಮನಸ್ಸಿರಬೇಕು ಎಂದು ಹಿರಿಯ ಸಹಕಾರಿ ಧುರೀಣ ಐತ್ತಪ್ಪ ಮವ್ವಾರು ಹೇಳಿದರು.
ನಾರಂಪಾಡಿ ಅನ್ನಪೂರ್ಣ ಸರ್ಕಲ್ ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದಲ್ಲಿ ಏಪ್ರಿಲ್ 9 ರಿಂದ 14ರ ತನಕ ನಡೆಯಲಿರುವ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮದ ಆಮಂತ್ರಣಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶ್ರೀಮದ್ ಭಾಗವತ ಸಪ್ತಾಹ ಸಮಿತಿಯ ಸಂಚಾಲಕ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಶಿರಂತಡ್ಕ ಮಾತನಾಡಿ, ಭಾಗವತ ಸಪ್ತಾಹವೆಂಬ ಕಾರ್ಯಕ್ರಮದ ಮೂಲಕ ಶ್ರವಣ ಮಾತ್ರದಲ್ಲಿ ಪುಣ್ಯ ಲಭಿಸುತ್ತದೆ. ನಾಡಿನ ಭಗವದ್ಭಕ್ತರಿಗೆ ಈ ಮಹತ್ಕಾರ್ಯದ ಆಮಂತ್ರಣವನ್ನು ನೀಡುವ ಕಾರ್ಯಕ್ಕೆ ಎಲ್ಲರೂ ಜೊತೆಗೂಡಬೇಕು ಎಂದರು. ಭಾಗವತ ಸಪ್ತಾಹ ಸಮಿತಿಯ ಕೋಶಾಧಿಕಾರಿ ಕೃಷ್ಣ ಮಣಿಯಾಣಿ, ಮುದ್ರಣ ಸಮಿತಿಯ ಅಧ್ಯಕ್ಷ ನಾರಾಯಣ ಗೋಸಾಡ, ಗಂಗಾಧರ ರೈ ಮಠದಮೂಲೆ, ವಾಣಿಪ್ರಸಾದ ಅಮ್ಮಣ್ಣಾಯ ಪಾವೂರು, ಶ್ರೀಮಂದಿರದ ನಾರಾಯಣ ಗುರುಸ್ವಾಮಿ, ಪವಿತ್ರನ್ ಕುರುಮುಜ್ಜಿ, ಮಾಧವ ಶರ್ಮ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣನ್ ನಾಯರ್ ಉಪ್ಪಂಗಳ ಸ್ವಾಗತಿಸಿ, ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಕಾರ್ಯದರ್ಶಿ ನಾರಾಯಣ ಕೆ.ಎಂ. ವಂದಿಸಿದರು. ಶ್ರೀಮಂದಿರದ ಸೇವಾಸಮಿತಿ ಅಧ್ಯಕ್ಷ ರಮೇಶ್ ಶರ್ಮ ಕುರುಮುಜ್ಜಿ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
