ಕಾಸರಗೋಡು: ಮನುಷ್ಯ, ಸಮಾಜ, ಸಂಸ್ಕೃತಿ ಪರಿಸರದೊಂದಿಗೆ ಮುಖಾಮುಖಿಯಾಗುವುದು ಮುಖ್ಯ, ಸಮುದಾಯವನ್ನು ಒಳಗೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿದವರು ಕಾರಂತರು ಎಂದು ಕನ್ನಡ ಸಂಶೋಧನಾರ್ಥಿ ಸಂಜಯ್ ಉಪ್ಪಿನ ಹೇಳಿದರು.
ಕೇರಳ ಕೇಂದ್ರೀಯ ವಿವಿಯ ಕನ್ನಡ ವಿಭಾಗ ಆಯೋಜಿಸಿದ್ದ ಸಂಶೋಧನ ತರಂಗ ಉಪನ್ಯಾಸ ಮಾಲಿಕೆಯ ಎರಡನೇ ಉಪನ್ಯಾಸದಲ್ಲಿ ಕಾರಂತರ ಕಾದಂಬರಿಗಳಲ್ಲಿ ಪರಿಸರ ಮತ್ತು ಸಾಮಾಜಿಕ ರಾಜಕಾರಣ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.
ಸಂಶೋಧನೆಯು ಬೆಳಕಿನಲ್ಲಿ ತಡಕಾಡುವ ಪ್ರಕ್ರಿಯೆ ಮಾತ್ರವಾಗದೆ ಕತ್ತಲಲ್ಲೂ ತಡಕಾಡುವ ಆ ಮೂಲಕ ಮುನ್ನಲೆಗೆ ಬರದ ಅಂಶಗಳನ್ನು ಮುನ್ನಲೆಗೆ ತರುವ, ಹೊಸ ನೋಟಗಳಿಗೆ ತೆರೆದುಕೊಳ್ಳುವ ಪ್ರಕ್ರಿಯೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥ, ಮಾಲಿಕೆಯ ಸಂಯೋಜಕ ಡಾ. ಪ್ರವೀಣ ಪದ್ಯಾಣ ಉಪಸ್ಥಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕರು ಡಾ. ಗೋವಿಂದರಾಜು ಎಂ ಕಲ್ಲೂರು ಹಾಗೂ ಚೇತನ್ ಮುಂಡಾಜೆ, ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾದರು.
ಸೋಮನಿಂಗ ಹಿಪ್ಪರಗಿ ಹಾಗೂ ಶೃತಿ ಆಶಯ ಗೀತೆ ಹಾಡಿದರು. ಸ್ನಾತಕೋತ್ತರ ವಿದ್ಯಾರ್ಥಿ ದರ್ಶನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಶೋಧನಾರ್ಥಿ ಶಶಾಂಕ್ ಹೆಚ್. ವಿ. ಸ್ವಾಗತಿಸಿ, ವಂದಿಸಿದರು.



