ಬೆಳಿಗ್ಗೆ 11 ಗಂಟೆಗೆ ಸದನ ಆರಂಭವಾಯಿತು. ಈ ವೇಳೆ ರಾಜ್ಯಸಭಾ ಅಧ್ಯಕ್ಷ ಸಿಪಿ ರಾಧಾಕೃಷ್ಣನ್ ಅವರು ರಂಜನ್ ಗೊಗೊಯ್ ಅವರಿಗೆ ವಿದಾಯ ಕೋರಿದರು.
"ಗೊಗೊಯ್ ಒಬ್ಬ ವಿಶಿಷ್ಟ ನ್ಯಾಯಶಾಸ್ತ್ರಜ್ಞರು. ಅವರು ರಾಜ್ಯಸಭೆಯಲ್ಲಿ ಕಾನೂನು ಜ್ಞಾನ ಹಂಚಿಕೊಂಡಿದ್ದಾರೆ. ಅವರ ಸಲಹೆಗಳು ಮತ್ತು ಚರ್ಚೆಗಳಲ್ಲಿನ ಭಾಗವಹಿಸುವಿಕೆಯನ್ನು ಸದನ ಕಳೆದುಕೊಳ್ಳಲಿದೆ," ಎಂದು ಹೇಳಿದರು
ಕೇಂದ್ರ ಸರ್ಕಾರವು 2020ರ ಮಾರ್ಚ್ 16ರಂದು ಗೊಗೊಯ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದ ನಾಲ್ಕು ತಿಂಗಳೊಳಗೆ ಈ ನೇಮಕ ನಡೆದಿದ್ದು, ವಿವಾದಕ್ಕೂ ಕಾರಣವಾಗಿತ್ತು. ಸರಕಾರಕ್ಕೆ ಅನುಕೂಲಕರ ತೀರ್ಪುಗಳ ಹಿನ್ನೆಲೆಯಲ್ಲಿ ಈ ನೇಮಕವನ್ನು ಸೇವೆಗೆ ಪ್ರತಿಫಲ ಎಂದು ಕೆಲವರು ಟೀಕಿಸಿದ್ದರು. ಅದೇ ವೇಳೆ ಭಾರತೀಯ ಬಾರ್ ಕೌನ್ಸಿಲ್ ಅಧ್ಯಕ್ಷರು ಈ ನಿರ್ಧಾರವನ್ನು ಸಮರ್ಥಿಸಿ, ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಸೇತುವೆಯಾಗಿ ಗೊಗೊಯ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದ್ದರು.
ಆದಾಗ್ಯೂ, ನಾಮನಿರ್ದೇಶಿತ ಸದಸ್ಯರಾಗಿ ಗೊಗೊಯ್ ಅವರ ಕಾರ್ಯಕ್ಷಮತೆ ಸಕ್ರಿಯ ಶಾಸನಾತ್ಮಕ ತೊಡಗಿಸಿಕೊಳ್ಳುವಿಕೆಯನ್ನು ತೋರಿಸಲಿಲ್ಲ. PRS ಸಂಗ್ರಹಿಸಿದ ದತ್ತಾಂಶದ ಪ್ರಕಾರ, ಅವರ ಹಾಜರಾತಿ ಶೇಕಡಾ 53ರಷ್ಟಿತ್ತು. ರಾಜ್ಯಸಭೆಯ ವೆಬ್ಸೈಟ್ನ ಮಾಹಿತಿಯಂತೆ, ಆರು ವರ್ಷಗಳ ಅವಧಿಯಲ್ಲಿ ಅವರು ಆಗಸ್ಟ್ 2023ರಲ್ಲಿ ದಿಲ್ಲಿ ಸೇವೆಗಳ ಮಸೂದೆ ಕುರಿತ ಒಂದೇ ಒಂದು ಚರ್ಚೆಯಲ್ಲಿ ಮಾತ್ರ ಭಾಗವಹಿಸಿದ್ದರು.
ದೆಹಲಿ ಸೇವೆಗಳ ಮೇಲಿನ ನಿಯಂತ್ರಣವನ್ನು ಕೇಂದ್ರದತ್ತ ಕೇಂದ್ರೀಕರಿಸುವ ಮಸೂದೆಯನ್ನು ಗೊಗೊಯ್ ಬೆಂಬಲಿಸಿದರು. ಈ ಕುರಿತು ಮಾತನಾಡಿದ ವೇಳೆ ಅವರು 'ಮೂಲ ರಚನೆ ಸಿದ್ಧಾಂತ'ವನ್ನು ಪ್ರಶ್ನಿಸಿದರು. ಇದಕ್ಕೆ ಸಂಬಂಧಿಸಿ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಿದರು.
ಆದರೆ, ಈ ಅಭಿಪ್ರಾಯವು ಅವರು ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ನೀಡಿದ ತೀರ್ಪಿಗೆ ವಿರುದ್ಧವಾಗಿದೆ. ರೋಜರ್ ಮ್ಯಾಥ್ಯೂ ಪ್ರಕರಣದಲ್ಲಿ ಅವರು ಮೂಲಭೂತ ರಚನೆ ಸಿದ್ಧಾಂತವನ್ನು ಸಮರ್ಥಿಸಿದ್ದರು. ಜೊತೆಗೆ, ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು 2017ರ ನ್ಯಾಯಮಂಡಳಿ ನಿಯಮಗಳನ್ನು ರದ್ದುಪಡಿಸಿದ್ದರು.
ಈ ಅವಧಿಯಲ್ಲಿ ಸಂಸತ್ತು ಕೃಷಿ ಕಾನೂನುಗಳು, ಹೊಸ ಕ್ರಿಮಿನಲ್ ಕಾನೂನುಗಳು, ನ್ಯಾಯಮಂಡಳಿ ಸುಧಾರಣಾ ಕಾಯ್ದೆ, ವಕ್ಫ್ ತಿದ್ದುಪಡಿ ಕಾಯ್ದೆ ಹಾಗೂ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಪ್ರಮುಖ ವಿಧೇಯಕಗಳನ್ನು ಚರ್ಚಿಸಿದ್ದರೂ, ಗೊಗೊಯ್ ಆ ಚರ್ಚೆಗಳಲ್ಲಿ ಭಾಗವಹಿಸಿರಲಿಲ್ಲ.
ಗಮನಾರ್ಹವಾಗಿ, ಆರು ವರ್ಷಗಳ ಅವಧಿಯಲ್ಲಿ ಅವರು ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಯಾವುದೇ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿಲ್ಲ.
2021ರ ಡಿಸೆಂಬರ್ ನಲ್ಲಿ ಎನ್ಡಿಟಿವಿ ಪತ್ರಕರ್ತ ಶ್ರೀನಿವಾಸನ್ ಜೈನ್ ಅವರು ಅವರ ಕಡಿಮೆ ಹಾಜರಾತಿ ಕುರಿತು ಪ್ರಶ್ನಿಸಿದಾಗ, ಕೋವಿಡ್ ಪರಿಸ್ಥಿತಿಯೇ ಕಾರಣ ಎಂದು ಗೊಗೊಯ್ ಸ್ಪಷ್ಟಪಡಿಸಿದ್ದರು. "ಸಾಂಕ್ರಾಮಿಕದ ವೇಳೆ ಆಸನ ವ್ಯವಸ್ಥೆ ನನಗೆ ಅನುಕೂಲಕರವಾಗಿರಲಿಲ್ಲ. ಮಹತ್ವದ ವಿಷಯಗಳಿದ್ದಾಗ ಮಾತ್ರ ನಾನು ರಾಜ್ಯಸಭೆಗೆ ಹೋಗುತ್ತೇನೆ. ನನ್ನ ಆಯ್ಕೆಯ ಮೇರೆಗೆ ಹೋಗಿ ಬರುತ್ತೇನೆ; ಯಾವುದೇ ಪಕ್ಷದ ಸಚೇತಕರು ನನ್ನನ್ನು ನಿಯಂತ್ರಿಸುವುದಿಲ್ಲ," ಎಂದು ಅವರು ಹೇಳಿದ್ದರು.

