ನವದೆಹಲಿ: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ದಾಳಿ ಮತ್ತು ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಕುರಿತು ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂಬ ಆರೋಪಗಳ ಮಧ್ಯೆಯೇ ಭಾರತದ ನಿಲುವು ಏನಿದೆ ಎಂಬುದನ್ನು ಪ್ರಧಾನಿ ಮೋದಿ ಅವರು ಬಹಿರಂಗಪಡಿಸಿದ್ದಾರೆ.
ಯಾವುದೇ ಸಮಸ್ಯೆಯನ್ನು ನಾವು ಸೇನಾ ಶಕ್ತಿ, ಮಿಲಿಟರಿ ಸಂಘರ್ಷಗಳಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಯಾವುದೇ ಸಮಸ್ಯೆಗಳಿಗೆ ಅದೊಂದೆ ಪರಿಹಾರವೂ ಅಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಆ ಮೂಲಕ ಭಾರತವು ಜಗತ್ತಿನ ಶಾಂತಿಯನ್ನು ಪ್ರತಿಪಾದಿಸುತ್ತದೆ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.
ಫಿನ್ಲ್ಯಾಂಡ್ ದೇಶದ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪ್ರಪಂಚ ಸದ್ಯ ಅಸ್ಥಿರತೆ ಕಡೆಗೆ ಸಾಗುತ್ತಿದೆ. ಉಕ್ರೇನ್ನಿಂದ ಪಶ್ಚಿಮ ಏಷ್ಯಾ ಅಷ್ಟೇ ಅಲ್ಲದೇ ಜಗತ್ತಿನ ಹಲವೆಡೆ ಅಸ್ಥಿರತೆ ಅಶಾಂತಿ ಮನೆ ಮಾಡುತ್ತಿದೆ ಎಂದು ಹೇಳಿದರು.
ಭಾರತ ಹಾಗೂ ಫಿನ್ಲ್ಯಾಂಡ್ ಶಾಂತಿ-ಸೌಹಾರ್ದತೆ, ಪರಸ್ಪರ ಮಾತುಕತೆ ಮತ್ತು ರಾಜತಾಂತ್ರಿಕತೆಯಲ್ಲಿ ವಿಶ್ವಾಸವನ್ನಿಟ್ಟಿವೆ. ಉಕ್ರೇನ್ ಸೇರಿದಂತೆ ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಬೇಕು ಎಂಬುದೇ ನಮ್ಮ ಆದ್ಯತೆಯಾಗಿದೆ ಎಂದು ಮೋದಿ ಅವರು ಹೇಳಿದರು.
ಭಾರತ ಹಾಗೂ ಫಿನ್ಲ್ಯಾಂಡ್ ಎರಡೂ ದೇಶಗಳು ಅಂತರರಾಷ್ಟ್ರೀಯ ಕಾನೂನುಗಳನ್ನು ಗೌರವಿಸುವ ಪ್ರಮುಖ ದೇಶಗಳಾಗಿವೆ ಎಂದರು.
ಅನೇಕ ವರ್ಷಗಳಿಂದ ಫಿನ್ಲ್ಯಾಂಡ್ ಜೊತೆಗಿನ ಭಾರತದ ನಂಟನ್ನು ಸ್ಮರಿಸಿದ ಮೋದಿ ಅವರು, ಯೂರೂಪಿಯನ್ ಯೂನಿಯನ್ ಜೊತೆಗಿನ ಭಾರತದ ಇತ್ತೀಚಿನ ಮದರ್ ಆಫ್ ಆಲ್ ಡೀಲ್ಸ್ನಲ್ಲಿ ಫಿನ್ಲ್ಯಾಂಡ್ ಪ್ರಮುಖ ಭಾಗಿದಾರ ಎಂದು ಹೇಳಿದರು.
'ಖಮೇನಿ ಹತ್ಯೆ ಬಗ್ಗೆ ಭಾರತ ಸರ್ಕಾರ ಖಂಡಿಸಲಿಲ್ಲ. ರಾಷ್ಟ್ರವೊಂದರ ಹಾಲಿ ಮುಖ್ಯಸ್ಥರ ಹತ್ಯೆ ಕುರಿತು ಚರ್ಚೆ ನಡೆಯದಿದ್ದರೆ, ಅದು ಸಮಕಾಲೀನ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ. ಆದರೂ, ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮೌನವಹಿಸಿರುವುದು ಎದ್ದು ಕಾಣುತ್ತಿದೆ' ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿರುವ ಬೆನ್ನಲ್ಲೆ ಮೋದಿ ಅವರು ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಬಗ್ಗೆ ಮೌನ ಮುರಿದಿದ್ದಾರೆ ಎನ್ನಲಾಗಿದೆ.

