ಟೆಹರಾನ್: ಇರಾನ್ನ ದಕ್ಷಿಣ ಪಾರ್ಸ್ ತೈಲ ಬಾವಿಯನ್ನು ಗುರಿಯಾಗಿಸಿಕೊಂಡು ನೈಸರ್ಗಿಕ ಅನಿಲ ಸೌಕರ್ಯಗಳ ಮೇಲೆ ಇಸ್ರೇಲ್ ದಾಳಿ ನಡೆಸಿರುವುದನ್ನು ಖತರ್ ವಿದೇಶಾಂಗ ಸಚಿವಾಲಯದ ವಕ್ತಾರ ಮಜೇದ್ ಅಲ್-ಅನ್ಸಾರಿ ಖಂಡಿಸಿದ್ದಾರೆ.
"ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿ ಉಲ್ಬಣಗೊಂಡಿರುವ ಸೇನಾ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇರಾನ್ನ ದಕ್ಷಿಣ ಪಾರ್ಸ್ ತೈಲ ಬಾವಿಗೆ ಸಂಬಂಧಿಸಿದ ನೈಸರ್ಗಿಕ ಅನಿಲ ಸೌಕರ್ಯಗಳ ಮೇಲೆ ಇಸ್ರೇಲ್ ದಾಳಿ ನಡೆಸಿರುವುದು ಅಪಾಯಕಾರಿ ಹಾಗೂ ಹೊಣೆಗೇಡಿ ನಡೆಯಾಗಿದೆ" ಎಂದು ಅವರು ಹೇಳಿದ್ದಾರೆ."ಶತ್ರುವಿನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದು ಜಾಗತಿಕ ಇಂಧನ ಭದ್ರತೆಯಲ್ಲದೆ, ಈ ಪ್ರಾಂತ್ಯದ ಜನರು ಹಾಗೂ ಪರಿಸರಕ್ಕೆ ಬೆದರಿಕೆಯಾಗಲಿದೆ" ಎಂದು ಅವರು ಎಚ್ಚರಿಸಿದ್ದಾರೆ.
"ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಳ್ಳುವುದನ್ನು ತಡೆಯುವುದು ಅತ್ಯಗತ್ಯವಾಗಿದೆ ಎಂದು ನಾವು ಪುನರುಚ್ಚರಿಸಿದ್ದೇವೆ ಹಾಗೂ ಪದೇಪದೇ ಹೇಳಿದ್ದೇವೆ. ಇಂತಹ ದಾಳಿಗಳಿಂದ ದೂರ ಉಳಿಯಬೇಕು ಎಂದು ನಾವು ಎಲ್ಲ ಪಕ್ಷಗಳನ್ನೂ ಕೇಳಿಕೊಳ್ಳುತ್ತೇವೆ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿರುವಂತೆ ಆಗ್ರಹಿಸುತ್ತೇವೆ. ಈ ಪ್ರಾಂತ್ಯದ ಭದ್ರತೆ ಹಾಗೂ ಸ್ಥಿರತೆಯನ್ನು ಸಂರಕ್ಷಿಸುವ ರೀತಿಯಲ್ಲಿ ಉದ್ವಿಗ್ನತೆಯನ್ನು ಶಮನಗೊಳಿಸಲು ಕೆಲಸ ಮಾಡುವಂತೆ ನಾವು ಮನವಿ ಮಾಡುತ್ತೇವೆ" ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಯುದ್ಧ ವಿಮಾನಗಳು ಇರಾನ್ನ ಪಾರ್ಸ್ ತೈಲ ಭೂಮಿಗೆ ಸಂಬಂಧಿಸಿದ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿವೆ ಎಂದು ವರದಿಯಾಗಿತ್ತು. ಇದೀಗ, ಇಸ್ರೇಲ್ ಯುದ್ಧ ವಿಮಾನಗಳು ದಕ್ಷಿಣ ಇರಾನ್ನ ಬುಶೆಹರ್ ಪ್ರಾಂತ್ಯದಲ್ಲಿನ ಅನಿಲ ಮೂಲಸೌಕರ್ಯದ ಮೇಲೆ ದಾಳಿ ನಡೆಸಿವೆ ಎಂದು ಇರಾನ್ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

